ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು.
ಪಿಟಿಐ ಚಿತ್ರ
ಜಮ್ಮು: ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಇಂದು (ಸೋಮವಾರ) ಸರ್ವಾನುಮತದಿಂದ ಅಂಗೀಕರಿಸಲಾಯಿತು.
ವಿಶೇಷ ಅಧಿವೇಶನದ ವೇಳೆ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಗುಂಡಿನ ದಾಳಿಯಲ್ಲಿ ಮೃತಪಟ್ಟ 26 ಮಂದಿಯ ಗೌರವಾರ್ಥವಾಗಿ ಅಧಿವೇಶನದ ಆರಂಭದಲ್ಲಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.
'ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯು ತನ್ನ ಎಲ್ಲಾ ನಾಗರಿಕರಿಗೆ ಶಾಂತಿ, ಅಭಿವೃದ್ಧಿ ಮತ್ತು ಸಮಗ್ರ ಸಮೃದ್ಧಿಯ ವಾತಾವರಣವನ್ನು ಕಲ್ಪಿಸುವ ಹಾಗೂ ರಾಷ್ಟ್ರದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಸಾಮರಸ್ಯವನ್ನು ಕದಡುವ, ಪ್ರಗತಿಗೆ ಅಡ್ಡಿಪಡಿಸುವ ದುಷ್ಟ ಸಂಚುಗಳನ್ನು ಹತ್ತಿಕ್ಕಲು ತನ್ನ ಅಚಲ ಬದ್ಧತೆಯನ್ನು ಪುನರುಚ್ಚರಿಸುತ್ತದೆ' ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ನಿರ್ಣಯದ ಮೇಲಿನ ಚರ್ಚೆಯ ಕೊನೆಯಲ್ಲಿ ಮಾತನಾಡಿದ ಸಿಎಂ, ಪಹಲ್ಗಾಮ್ ದಾಳಿಯನ್ನು ಖಂಡಿಸಿದರು. ಪ್ರವಾಸೋದ್ಯಮ ಖಾತೆಯನ್ನೂ ಹೊಂದಿರುವ ಅವರು, ಪ್ರವಾಸಿಗರಿಗೆ ಸುರಕ್ಷತೆ ಖಾತ್ರಿಪಡಿಸುವ ತಮ್ಮ ಹೊಣೆ ನಿಭಾಯಿಸುವಲ್ಲಿ ವಿಫಲವಾಗಿರುವುದಾಗಿ ಒಪ್ಪಿಕೊಂಡರು.
'ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯ ಹೊಣೆ ಚುನಾಯಿತ ಸರ್ಕಾರದ್ದಲ್ಲ. ಹಾಗಂತ, ಈ (ದಾಳಿಯ) ಅವಕಾಶವನ್ನು ರಾಜ್ಯ ಸ್ಥಾನಮಾನಕ್ಕೆ ಒತ್ತಾಯಿಸಲು ಬಳಸಿಕೊಳ್ಳುವುದಿಲ್ಲ. ಪಹಲ್ಗಾಮ್ ದಾಳಿ ವಿಚಾರವನ್ನು ಮುಂದಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಹೇಗೆ ಕೇಳಲಿ?' ಎಂದ ಅವರು, 'ದಕ್ಷಿಣದಿಂದ ಉತ್ತರದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ, ಅರುಣಾಚಲದಿಂದ ಗುಜರಾತ್ ವರೆಗೆ, ಕಾಶ್ಮೀರದಿಂದ ಕೇರಳದವರೆಗೂ ಈ ದಾಳಿಯ ಪರಿಣಾಮ ಉಂಟಾಗಿದೆ' ಎಂದಿದ್ದಾರೆ.
'ಪಹಲ್ಗಾಮ್ ದಾಳಿಯು ನಮ್ಮೆಲ್ಲ ನಿರೀಕ್ಷೆಗಳನ್ನು ಹಿಮ್ಮೆಟ್ಟಿಸಿದೆ. ಮತ್ತೆ ಯಾವಾಗ ಇಂತಹ ದಾಳಿ ನಡೆಯುವುದೋ ಎಂಬ ಆತಂಕ ಉಂಟಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದವರಲ್ಲಿ ಕ್ಷಮೆ ಕೇಳಲು ನನ್ನಲ್ಲಿ ಪದಗಳೇ ಇಲ್ಲ' ಎಂದು ನೊಂದುಕೊಂಡಿದ್ದಾರೆ.
ಇಂತಹ ಅಮಾನವೀಯ ಕೃತ್ಯದ ಹೊರತಾಗಿಯೂ ಕಾಶ್ಮೀರದಲ್ಲಿ ಭರವಸೆಯೊಂದು ಮೂಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಗ್ಗಟ್ಟಿನ ಪ್ರತಿಭಟನೆಗಳು ನಡೆದಿವೆ. ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರು ಅವನ್ನೆಲ್ಲ ಆಯೋಜಿಸಿರಲಿಲ್ಲ. ಆಕ್ರೋಶ ಮತ್ತು ದುಃಖ ಜನರ ಹೃದಯದಿಂದ ನೇರವಾಗಿ ವ್ಯಕ್ತವಾಗಿದೆ. ಎಲ್ಲ ಮಸೀದಿಗಳಲ್ಲಿ ಮೌನಾಚರಣೆ ನಡೆಸಲಾಗಿದೆ' ಎಂದು ಹೇಳಿದ್ದಾರೆ.
ಈ ಬದಲಾವಣೆಯನ್ನು ಬೆಂಬಲಿಸಬೇಕು ಹಾಗೂ ಬಲಪಡಿಸಬೇಕು ಎಂದು ಒತ್ತಿ ಹೇಳಿದ ಸಿಎಂ, 'ಜನರಲ್ಲಿ ತಾನಾಗಿಯೇ ಮೂಡಿರುವ ಒಗ್ಗಟ್ಟಿನ ಮನೋಭಾವ, ಸಹಾನುಭೂತಿ ಮತ್ತು ಸ್ಥಿತಿಸ್ಥಾಪಕ ಗುಣವನ್ನು ಪ್ರೋತ್ಸಾಹಿಸಬೇಕಿದೆ' ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.