ಮೋಹನ್ ಭಾಗವತ್
(ಪಿಟಿಐ ಚಿತ್ರ)
ನಾಗ್ಪುರ: 'ಪಹಲ್ಗಾಮ್ ದಾಳಿಯ ನಂತರ ದೇಶದ ನಾಯಕತ್ವದ ದೃಢಸಂಕಲ್ಪ, ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸಮಾಜದ ಏಕತೆಯು ಬೆಳಗಿತು' ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು (ಗುರುವಾರ) ಅಭಿಪ್ರಾಯಪಟ್ಟಿದ್ದಾರೆ.
ವಿಜಯದಶಮಿ ಹಬ್ಬದ ಸಮಾವೇಶದಲ್ಲಿ ಭಾಗವಹಿಸಿದ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ನಂತರ ವಿವಿಧ ದೇಶಗಳು ತೆಗೆದುಕೊಂಡ ನಿಲುವುಗಳು ಭಾರತದೊಂದಿಗಿನ ಬಾಂಧವ್ಯದ ಸ್ವರೂಪ ಹಾಗೂ ವ್ಯಾಪ್ತಿಯನ್ನು ತೋರಿಸಿತು ಎಂದಿದ್ದಾರೆ.
'ನಾವು ಇತರೆ ದೇಶಗಳೊಂದಿಗೆ ಸ್ನೇಹ ಬಾಂಧವ್ಯವನ್ನು ಹೊಂದಿದ್ದರೂ ಭದ್ರತೆಯ ವಿಷಯಕ್ಕೆ ಬಂದಾಗ ಹೆಚ್ಚು ಎಚ್ಚರದಿಂದಿರಬೇಕು ಹಾಗೂ ಬಲಶಾಲಿಯಾಗಬೇಕು. ಪಹಲ್ಗಾಮ್ ದಾಳಿಯ ನಂತರ ವಿವಿಧ ರಾಷ್ಟ್ರಗಳು ತೆಗೆದುಕೊಂಡ ನಿಲುವುಗಳು ಯಾರು ನಮ್ಮ ಮಿತ್ರರು ಹಾಗೂ ಅವುಗಳ ವ್ಯಾಪ್ತಿ ಎಷ್ಟರ ಮಟ್ಟಿಗೆ ಇದ್ದವು ಎಂಬುದನ್ನು ಬಹಿರಂಗಪಡಿಸಿತು' ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನೆಯ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಮೂಲಕ ಭಾರತ ತಕ್ಕ ಉತ್ತರವನ್ನೇ ನೀಡಿತು ಎಂದು ಭಾಗವತ್ ಉಲ್ಲೇಖಿಸಿದ್ದಾರೆ.
'ಈ ದಾಳಿಯು ದೇಶದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ತಕ್ಕ ಉತ್ತರ ನೀಡಿತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.