ಶುಭಂ ದ್ವಿವೇದಿ
(ಪಿಟಿಐ ಚಿತ್ರ)
ಕಾನ್ಪುರ: 'ಹಣ ಅಥವಾ ಉದ್ಯೋಗ ಬೇಡ. ನನ್ನ ಪತಿ ಪತಿ ಶುಭಂ ದ್ವಿವೇದಿಗೆ ಹುತಾತ್ಮ ಸ್ಥಾನಮಾನ ನೀಡಬೇಕು' ಎಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕರ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ಶುಭಂ ದ್ವಿವೇದಿ ಅವರ ಪತ್ನಿ ಆಶಾನ್ಯ ಮನವಿ ಮಾಡಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕಾನ್ಪುರ ಮೂಲದ ಉದ್ಯಮಿ ಶುಭಂ ದ್ವಿವೇದಿ ಸೇರಿದಂತೆ 26 ಮಂದಿ ಮೃತಪಟ್ಟಿದ್ದರು.
'ನನ್ನ ಪತಿಗೆ ಹುತಾತ್ಮ ಸ್ಥಾನಮಾನ ಸಿಕ್ಕಿಲ್ಲ. ಅಲ್ಲದೆ ಈವರೆಗೆ ದಾಳಿಕೋರರನ್ನು ನಿರ್ಮೂಲನೆ ಮಾಡುವಲ್ಲಿ ಸರ್ಕಾರವು ಯಶಸ್ವಿಯಾಗಿಲ್ಲ' ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
'ಭಯೋತ್ಪಾದಕರಿಗೆ ಆದಷ್ಟು ಬೇಗನೇ ಶಿಕ್ಷೆಯಾಗಬೇಕು. ಇನ್ನೊಂದಿಗೂ ಕಾಶ್ಮೀರಕ್ಕೆ ಹೋಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
'ನನಗೆ ಉದ್ಯೋಗ ಅಥವಾ ಹಣ ಬೇಕಾಗಿಲ್ಲ. ನನ್ನ ಪತಿಗೆ ಹುತಾತ್ಮ ಸ್ಥಾನ ನೀಡಬೇಕು. ಈ ನೋವನ್ನು ನನ್ನ ಜೀವನದುದ್ದಕ್ಕೂ ಹೊತ್ತುಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
'ನಾನೀಗ ಹೊರಗಡೆ ಹೋಗಲು ಇಷ್ಟಪಡುವುದಿಲ್ಲ. ಟೈರ್ ಒಡೆಯುವ ಶಬ್ದ ಕೇಳಿಸಿದರೂ ನನ್ನಲ್ಲಿ ನಡುಕ ಉಂಟು ಮಾಡುತ್ತಿದೆ' ಎಂದು ಮನೆಯ ಕೋಣೆಯಲ್ಲಿ ಪತಿಯನ್ನು ನೆನಪಿಸುತ್ತಾ ಕೊರಗುತ್ತಿರುವ ಆಶಾನ್ಯ ತಿಳಿಸಿದ್ದಾರೆ.
'ತಮ್ಮನ್ನು ಭೇಟಿ ಮಾಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪತಿಗೆ ಹುತಾತ್ಮ ಸ್ಥಾನಮಾನ ನೀಡುವ ಕುರಿತಂತೆ ಪ್ರಧಾನಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ. ಸಂಸತ್ತಿನಲ್ಲೂ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ' ಎಂದು ಆಶಾನ್ಯ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.