
ಬಂಧನ
ಜೈಪುರ: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗಡಿ ಮೂಲಕ ಭಾರತದ ಒಳನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಬಂಧಿಸಿದ್ದಾರೆ.
ಅಧಿಕಾರಿಗಳು ಗುರುವಾರ ಈ ಬಗ್ಗೆ ಮಾಹಿತಿ ನೀಡಿದ್ದು, ನಾಚ್ನಾ ಮತ್ತು ನೋಖಾ ಸೆಕ್ಟರ್ಗಳಿಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಪಾಕ್ ವ್ಯಕ್ತಿಯನ್ನು ಸೆರೆ ಹಿಡಿಯಲಾಗಿದೆ ಎಂದಿದ್ದಾರೆ.
ಬಂಧಿತ ವ್ಯಕ್ತಿ ತನ್ನನ್ನು ಇಶ್ರತ್ (35) ಎಂದು ಪರಿಚಯಿಸಿಕೊಂಡಿದ್ದು, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾ ಜಿಲ್ಲೆಯ ನಿವಾಸಿ, ರಾಣಾ ಮೊಹಮ್ಮದ್ ಅಸ್ಲಾಂ ಎಂಬವರ ಪುತ್ರ ಎಂದು ಹೇಳಿಕೊಂಡಿದ್ದಾನೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಇಶ್ರತ್ ಮಾನಸಿಕ ಅಸ್ವಸ್ಥನಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆತನ ಸಂಪೂರ್ಣ ವಿವರ ತಿಳಿಯಲು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿ, ಜಂಟಿ ತನಿಖಾ ಕೇಂದ್ರದಿಂದ ವಿಚಾರಣೆ ನಡೆಸಲಾಗುತ್ತದೆ. ಮುಂದಿನ ಪ್ರಕ್ರಿಯೆಗಾಗಿ ಬಂಧಿತನನ್ನು ನೋಖಾ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ ಎಂದೂ ಹೇಳಿದ್ದಾರೆ.
ಜತೆಗೆ ಬಂಧಿತನಿಂದ ಪಾಕಿಸ್ತಾನಿ ನೋಟುಗಳು, ಒಂದು ಚಾಕು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.