ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರ ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನುಸುಳುಕೋರನೊಬ್ಬನನ್ನು ಗಡಿ ಕಾವಲು ಪಡೆಯ (ಬಿಎಸ್ಎಫ್) ಯೋಧರು ಹತ್ಯೆಗೈದಿದ್ದಾರೆ.
ರಾಮಘಡ ಸೆಕ್ಟರ್ನ ಮಲ್ಲುಚಕ್ ಬಾರ್ಡರ್ನ ಔಟರ್ ಪೋಸ್ಟ್ ಪ್ರದೇಶದಲ್ಲಿ ಘಟನೆ ನಡೆದಿದೆ. ಕಳೆದ ವರ್ಷ ನವೆಂಬರ್ನಿಂದ ಇಲ್ಲಿಯ ವರೆಗೆ ಇಂತಹ ಮೂರನೇ ಘಟನೆ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನ 3.55ರ ಹೊತ್ತಿಗೆ ಪಾಕಿಸ್ತಾನದ ಲೆಹ್ರಿ ಕಲನ್ ಗ್ರಾಮದಿಂದ ಆಕ್ರಮಣಕಾರಿಯಾಗಿ ಚಲಿಸುತ್ತಾ ಬಂದ ವ್ಯಕ್ತಿ ಅಂತರ ರಾಷ್ಟ್ರೀಯ ಗಡಿ ಬೇಲಿಯನ್ನು ದಾಟಿ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸಿದ್ದರು.
ವ್ಯಕ್ತಿಯನ್ನು ಪತ್ತೆ ಹಚ್ಚಿದ ಬಿಎಸ್ಎಫ್ ಯೋಧರು ಎಚ್ಚರಿಕೆ ರವಾನಿಸಿದರು. ಆದರೆ ಆತ ಪರಾರಿಯಾಗಲು ಯತ್ನಿಸಿದ ವೇಳೆ ಗುಂಡು ಹಾರಿಸಲಾಯಿತು.
ಇದನ್ನೂ ಓದಿ:ಕಣ್ಗಾವಲು ಹಡಗು ಶೀಘ್ರ ಸೇವೆಗೆ ಸಮರ್ಪಣೆ
ಬಸಂತರ್ ನದಿಯು ಒಳನುಸುಳುವಿಕೆಯ ಸಾಂಪ್ರದಾಯಿಕ ಮಾರ್ಗವಾಗಿದೆ. ಲೆಹ್ರಿ ಕಲನ್ ಉಗ್ರರ ಹಳೆಯ ನೆಲೆಯಾಗಿದೆ.
ಹತ್ಯೆಗೀಡಾದ ವ್ಯಕ್ತಿಯ ಜೇಬಿನಲ್ಲಿ ಪಾಕಿಸ್ತಾನ ಕರೆನ್ಸಿಯ 200 ರೂ. ನೋಟು ಪತ್ತೆ ಹಚ್ಚಲಾಗಿದ್ದು, ಆತ ಮಾನಸಿಕವಾಗಿ ಅಸ್ವಸ್ಥ ಎಂಬುದು ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಫ್ಯಾಗ್ ಮೀಟಿಂಗ್ನಲ್ಲಿ ಆತನ ಮೃತದೇಹವನ್ನು ಪಾಕಿಸ್ತಾನ ರೇಜರ್ಗಳಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.