ಆಯೋಧ್ಯೆ: ಪಾಕಿಸ್ತಾನಕ್ಕೆ ಕೊನೆಗಾಲ ಹತ್ತಿರವಾಗುತ್ತಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಶುಕ್ರವಾರ ಆಯೋಧ್ಯೆಯ ಹನುಮಾನ್ಗಿರಿಯಲ್ಲಿ ಹನುಮಾನ್ ಮಂಟಪವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ಪಾಕಿಸ್ತಾನವೇ ನಮ್ಮ ಅಮಾಯಕ ಜನರ ಧರ್ಮವನ್ನು ಕೇಳಿ ಅವರನ್ನು ಗುಂಡಿಟ್ಟು ಕೊಂದಿದೆ ಎಂದರು.
ಭಾರತೀಯ ಸೇನೆಯ ಪ್ರತಿಕಾರದ ದಾಳಿಯಲ್ಲಿ 124 ಉಗ್ರಗಾಮಿಗಳು ಮೃತಪಟ್ಟಿದ್ದಾರೆ. ಇದರಲ್ಲಿ ಭಾರತದ ತಪ್ಪಿಲ್ಲ, ಬದಲಾಗಿ ಭಯೋತ್ಪಾದಕರಿಗೆ ಆಶ್ರಯ ಕೊಡುತ್ತಿರುವ ಪಾಕಿಸ್ತಾನಿಯರು ಘಟನೆಯ ಹೊಣೆ ಹೊರಬೇಕು ಎಂದು ತಿಳಿಸಿದರು.
ಅವರು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ, ಮುಂದೊಂದು ದಿನ ಅದೇ ಪಾಕಿಸ್ತಾನವನ್ನು ನಾಶಮಾಡಲಿದೆ ಎಂದರು.
‘ಇದು ಹೊಸ ಭಾರತ. ನಾವು ಯಾರ ತಂಟೆಗೂ ಹೋಗುವುದಿಲ್ಲ, ನಮ್ಮ ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಗುಡುಗಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವಿರುವುದರಿಂದ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಾಧ್ಯವಾಯಿತು. ನರೇಂದ್ರ ಮೋದಿಯವರ ದೂರದೃಷ್ಠಿಯ ನಾಯಕತ್ವ ಇದಕ್ಕೆ ಕಾರಣ ಎಂದು ಹೊಗಳಿದರು.
ಆಯೋಧ್ಯೆಯ ಕೀರ್ತಿ ಪತಾಕೆಯನ್ನು ಉಳಿಸಿಕೊಂಡು ಹೋಗುತ್ತಿರುವುದಕ್ಕೆ ಅಲ್ಲಿನ ಸಾಧುಗಳಿಗೆ ಕೃತಜ್ಞತೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.