
ಅಹಮದಾಬಾದ್: ಪಾಕಿಸ್ತಾನದ ಪರ ಬೇಹುಗಾರಿಗೆ ಮಾಡುತ್ತಿದ್ದ ಆರೋಪದಡಿ ಸೇನಾ ಸಿಬ್ಬಂದಿ ಮತ್ತು ಮಹಿಳೆಯೊಬ್ಬರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಗುರುವಾರ ಬಂಧಿಸಿದೆ.
ಬಿಹಾರ ಮೂಲದ ಮಾಜಿ ಸುಬೇದಾರ್ ಮೇಜರ್ ಅಜಯ್ ಕುಮಾರ್ ಸಿಂಗ್ ಅವರನ್ನು ಗೋವಾದಲ್ಲಿ ಹಾಗೂ ಉತ್ತರಪ್ರದೇಶ ಮೂಲದ ರಶ್ಮನಿ ಪಾಲ್ ಅವರನ್ನು ದಾದ್ರಾ ಮತ್ತು ನಗರ ಹವೇಲಿಯಲ್ಲಿ ಬಂಧಿಸಲಾಗಿದೆ.
ಗೃಹಿಣಿಯಾಗಿರುವ ರಶ್ಮನಿ ಸಾಮಾಜಿಕ ಜಾಲತಾಣದ ಮೂಲಕ ಬೇಹುಗಾರಿಕೆ ಜಾಲಕ್ಕೆ ಸೇರಿದ್ದರು. ಹಲವು ಜನರಿಗೆ ಹನಿಟ್ರ್ಯಾಪ್ ಮಾಡಿ ಮಾಹಿತಿ ಸಂಗ್ರಹಿಸಿ, ಪಾಕಿಸ್ತಾನಿ ಬೇಹುಗಾರರಿಗೆ ರವಾನಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದರು ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಗೋವಾದಲ್ಲಿ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ, ಅಜಯ್ಸಿಂಗ್ ಅವರು 2022ರಲ್ಲಿ ನಾಗಲ್ಯಾಂಡ್ನ ದೀಮಾಪುರದಲ್ಲಿ ಸೇನೆಯ ಕರ್ತವ್ಯದಲ್ಲಿದ್ದಾಗ ಪಾಕಿಸ್ತಾನ ಗುಪ್ತಚರ ಅಧಿಕಾರಿಯೊಂದಿಗೆ ಸಂಪರ್ಕ ಸಾಧಿಸಿದ್ದರು. ಅಂಕಿತಶರ್ಮ ಎಂಬ ಹೆಸರಿನಲ್ಲಿ ಅಜಯ್ಸಿಂಗ್ ಅವರನ್ನು ಬಲೆಗೆ ಬೀಳಿಸಿಕೊಂಡಿದ್ದ ಪಾಕ್ ಅಧಿಕಾರಿಗಳು, ಭಾರತ ಸೇನೆಗೆ ಅಧಿಕಾರಿಗಳ ವರ್ಗವಾಣೆ ಮತ್ತು ಚಲನವಲನಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಂತ್ರಾಂಶ ಒಂದನ್ನು ಮೊಬೈಲ್ಗೆ ಹಾಕಿಕೊಳ್ಳುವಂತೆ ನಿರ್ದೇಶನ ನೀಡಿದ್ದ ಪಾಕ್ ಅಧಿಕಾರಿಗಳು ವಾಟ್ಸ್ಆ್ಯಪ್ ಸಹಾಯವಿಲ್ಲದೇ ನೇರವಾಗಿ ಸಿಂಗ್ ಮೊಬೈಲ್ನಿಂದ ಮಾಹಿತಿ ಕಲೆ ಹಾಕುತ್ತಿದ್ದರು.
ವಿಚಾರಣೆ ವೇಳೆ ರಶ್ಮನಿ ಪಾಲ್ ಹೆಸರು ಕೇಳಿಬಂದಿದ್ದು, ಅವರು ಪಾಕಿಸ್ತಾನಿ ಬೇಹುಗಾರರ ಮಾಹಿತಿಯ ಮೂಲವಾಗಿದ್ದರು. ಪಾಕಿಸ್ತಾನದ ಪ್ರಮುಖ ಬೇಹುಗಾರರಾದ ಅಬ್ದುಲ್ ಸತ್ತರ್ ಮತ್ತು ಖಲೀದ್ ಜೊತೆ ಸಂಪರ್ಕದಲ್ಲಿದ್ದ ರಶ್ಮನಿ, ಅವರಿಂದ ಹಣ ಪಡೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.