ADVERTISEMENT

ಅಪರಾಧಿಗಳೊಂದಿಗೆ ಮಾತುಕತೆ ಏಕೆ: ಇಮ್ರಾನ್‌ಗೆ ಪಾಕ್‌ ‘ಸುಪ್ರೀಂ’ ಪ್ರಶ್ನೆ ಸುರಿಮಳೆ

2014ರ ಸೇನಾ ಶಾಲೆ ಮೇಲೆ ಉಗ್ರರ ದಾಳಿ ಪ್ರಕರಣದ ವಿಚಾರಣೆ

ಪಿಟಿಐ
Published 10 ನವೆಂಬರ್ 2021, 15:13 IST
Last Updated 10 ನವೆಂಬರ್ 2021, 15:13 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: 2014ರಲ್ಲಿ ಸೇನಾ ಪಬ್ಲಿಕ್‌ ಶಾಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಬಹುತೇಕ ವಿದ್ಯಾರ್ಥಿಗಳನ್ನೇ ಒಳಗೊಂಡ ಸುಮಾರು 150 ಜನರ ಹತ್ಯಾಕಾಂಡದ ಅಪರಾಧಿಗಳೊಂದಿಗೆ ‘ನೀವು ಏಕೆ ಮಾತುಕತೆ ನಡೆಸುತ್ತಿದ್ದೀರಿ’ ಎಂದು ಸುಪ್ರೀಂ ಕೋರ್ಟ್ ಪೀಠವು, ವಿಚಾರಣೆ ವೇಳೆ ಬುಧವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿತು.

2014ರಲ್ಲಿ ಪೇಶಾವರದಲ್ಲಿ ಸೇನಾ ಪಬ್ಲಿಕ್‌ ಶಾಲೆ (ಎಪಿಎಸ್‌) ತೆಹ್ರಿಕ್‌ –ಇ– ತಾಲಿಬಾನ್‌ ಪಾಕಿಸ್ತಾನ್‌ ಸಂಘಟನೆಯ ಉಗ್ರರು ನಡೆಸಿದದಾಳಿಯಲ್ಲಿ ಸುಮಾರು 132 ಮಕ್ಕಳೂ ಹತ್ಯೆಯಾಗಿದ್ದರು.

ಪಾಕಿಸ್ತಾನದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಪಿ) ಗುಲ್ಜಾರ್‌ ಅಮಹ್ಮದ್‌ ಮತ್ತು ನ್ಯಾಯಮೂರ್ತಿ ಖಾಜಿ ಮೊಹ್ಮಮದ್‌ ಅಮಿನ್‌ ಅಹ್ಮದ್‌ ಹಾಗೂ ನ್ಯಾಯಮೂರ್ತಿ ಇಜಾಜುಲ್‌ ಅಹ್ಸಾನ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಖಾನ್‌ ಅವರನ್ನು ವಿಚಾರಣೆಗೆ ಒಳಪಡಿಸಿತು.

ADVERTISEMENT

ಖಾನ್‌ ಅವರನ್ನು ನ್ಯಾಯಾಲಯಕ್ಕೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಬರಹೇಳಲಾಗಿತ್ತು. ಆದರೆ, ಅವರು ಅಂದಾಜು ಎರಡು ಗಂಟೆ ತಡವಾಗಿ, ಅಂದರೆ, ಮಧ್ಯಾಹ್ನಕ್ಕೆ 2 ಗಂಟೆ ಮುಂಚಿತವಾಗಿ ನ್ಯಾಯಾಲಯಕ್ಕೆ ಆಗಮಿಸಿದರು.

‘ಎಪಿಎಸ್ ದಾಳಿಯಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು ಸಮಧಾನಪಡಿಸುವುದು ಅತ್ಯಗತ್ಯ’ ಎಂದು ನ್ಯಾಯಮೂರ್ತಿ ಅಹ್ಸಾನ್ ಪ್ರಧಾನಿಯನ್ನು ಉದ್ದೇಶಿಸಿ ಹೇಳಿದರು.

‘ಎಪಿಎಸ್ ಸಂತ್ರಸ್ತರ ಪೋಷಕರು ಸರ್ಕಾರದಿಂದ ಯಾವುದೇ ಪರಿಹಾರ ಕೇಳುತ್ತಿಲ್ಲ. ಆ ದಿನ ಭದ್ರತಾ ವ್ಯವಸ್ಥೆ ಎಲ್ಲಿತ್ತು ಎಂದು ಪೋಷಕರು ಕೇಳುತ್ತಿದ್ದಾರೆ? ನಮ್ಮ ಆದೇಶದ ಹೊರತಾಗಿಯೂ, ಏನೂ ಮಾಡಿಲ್ಲವಲ್ಲ ನೀವು’ ಎಂದು ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿಯನ್ನು ತರಾಟೆಗೆ ತೆಗೆದುಕೊಂಡರು.

ಎಪಿಎಸ್ ಪ್ರಕರಣದಲ್ಲಿ ತಮ್ಮ ಸರ್ಕಾರವು ಕೈಗೊಂಡಿರುವ ಕ್ರಮದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಪ್ರಧಾನಿಗೆ ಸೂಚಿಸಿದರೆಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಎಪಿಎಸ್ ಹತ್ಯಾಕಾಂಡದ ನಂತರ ರಾಷ್ಟ್ರೀಯ ಕ್ರಿಯಾ ಯೋಜನೆ ಪರಿಚಯಿಸಲಾಗಿದೆ ಎಂದು ಪ್ರಧಾನಿ ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿದರು.

ಎಪಿಎಸ್ ಶಾಲಾ ಮಕ್ಕಳ ಪೋಷಕರ ಅಳಲನ್ನು ಸರ್ಕಾರ ಆಲಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿದೆ.

ನ್ಯಾಯದ ಅವಶ್ಯಕತೆಗಳನ್ನು ಸರ್ಕಾರ ಪೂರೈಸುತ್ತದೆ ಎಂದು ಖಾನ್ ಪೀಠಕ್ಕೆ ಭರವಸೆ ನೀಡಿದರು. ಪ್ರತಿಯಾಗಿ ಸುಪ್ರೀಂ ಕೋರ್ಟ್, ಅ.20ರ ತೀರ್ಪಿನ ಅನುಷ್ಠಾನ ಖಾತ್ರಿಪಡಿಸಿಕೊಳ್ಳುವಂತೆ ಪ್ರಧಾನಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.