ಶ್ರೀನಗರ: ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಶುಕ್ರವಾರ ಕದನ ವಿರಾಮ ಉಲ್ಲಂಘಿಸಿ ನಡೆಸಿದ್ದ ಅಪ್ರಚೋದಿತ ದಾಳಿಯ ವೇಳೆ ಪಾಕಿಸ್ತಾನ ಸೇನೆಯು ಭಾರಿ ಪ್ರಮಾಣದ ತೋಪುಗಳನ್ನು ಬಳಸಿತ್ತು ಎಂದು ಹಿರಿಯ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅಧಿಕಾರಿಯೊಬ್ಬರು ಭಾನುವಾರ ಹೇಳಿದರು.
ಈ ಕಾರಣದಿಂದಾಗಿಯೇ ಎಲ್ಒಸಿ ಬಳಿ ಗುರೇಜ್ ವಲಯದಿಂದ ಉರಿ ವಲಯದವರೆಗಿನ ಭಾರತದ ಭಾಗದ ಹಳ್ಳಿಗಳಲ್ಲಿ ಹೆಚ್ಚಿನ ಪ್ರಾಣಹಾನಿ ಹಾಗೂ ಆಸ್ತಿಗಳು ನಾಶವಾಗಿದೆ ಎಂದು ತಿಳಿಸಿದ್ದಾರೆ. ಈ ಪಾಕ್ ಯೋಧರು ಸೇರಿ 11 ಜನರು ಮೃತಪಟ್ಟಿದ್ದರು.
‘ಪ್ರಚೋದನೆ ಇಲ್ಲದೇ ಪಾಕಿಸ್ತಾನದ ಯೋಧರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಳಸಿದ್ದರು. ಸೇನೆಯೋಧರು ಹಾಗೂ ಬಿಎಸ್ಎಫ್ ಸಿಬ್ಬಂದಿ ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಪಾಕಿಸ್ತಾನದ ಹಲವು ಬಂಕರ್ಗಳು ನಾಶವಾಗಿವೆ’ ಎಂದು ಬಿಎಸ್ಎಫ್ ಇನ್ಸ್ಪೆಕ್ಟರ್ ಜನರಲ್ (ಕಾಶ್ಮೀರ) ರಾಜೇಶ್ ಮಿಶ್ರಾ ತಿಳಿಸಿದರು.
ಮೃತ ಬಿಎಸ್ಎಫ್ ಸಬ್ಇನ್ಸ್ಪೆಕ್ಟರ್ ರಾಕೇಶ್ ದೋವಲ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ಈ ಕೃತ್ಯದ ವೇಳೆ 250–300 ಉಗ್ರರು ಗಡಿ ದಾಟಿ ಒಳನುಸುಳಲು ಸಜ್ಜಾಗಿದ್ದರು. ಈ ಪ್ರಯತ್ನವನ್ನು ಬಿಎಸ್ಎಫ್ ಸಿಬ್ಬಂದಿ ಹಾಗೂ ಯೋಧರು ವಿಫಲಗೊಳಿಸಿದ್ದಾರೆ. ಪಾಕಿಸ್ತಾನದ ಈ ಕೃತ್ಯದಲ್ಲಿ ನಾಗರಿಕರು ಪ್ರಾಣ ಕಳೆದುಕೊಂಡಿರುವುದನ್ನು ಮತ್ತು ಅವರ ಆಸ್ತಿಯು ಹಾನಿಯಾಗಿರುವುದನ್ನು ಮಾನವ ಹಕ್ಕುಗಳ ರಕ್ಷಣೆ ಸಂಸ್ಥೆಗಳು ಗಮನಿಸಬೇಕು’ ಎಂದು ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.