ADVERTISEMENT

ಪಳನಿಸ್ವಾಮಿ ಎಐಡಿಎಂಕೆ ಜನರಲ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ: ಮದ್ರಾಸ್ ಹೈಕೋರ್ಟ್

ಪಿಟಿಐ
Published 28 ಮಾರ್ಚ್ 2023, 7:58 IST
Last Updated 28 ಮಾರ್ಚ್ 2023, 7:58 IST
   

ಚೆನ್ನೈ: ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಅದರ ’ಜನರಲ್ ಕೌನ್ಸಿಲ್’ ಮೇಲಿನ ಹಿಡಿತ ಕೂಡ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರಿಗೆ ಸೇರತಕ್ಕದ್ದು ಎಂದು ಮದ್ರಾಸ್‌ ಹೈಕೋರ್ಟ್ ತೀರ್ಪು ನೀಡಿದೆ. ಈ ವ್ಯಾಜ್ಯದಲ್ಲಿ ಒ.ಪನ್ನೀರ್‌ಸೆಲ್ವಂ ಅವರಿಗೆ ಹಿನ್ನೆಡೆಯಾಗಿದೆ.

ಮಾ.26ರಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಸುವುದಾಗಿ ಎಐಎಡಿಎಂಕೆ ಹೋದ ಶುಕ್ರವಾರ ಘೋಷಿಸಿತ್ತು. ಇದಕ್ಕೆ ತಡೆ ನೀಡುವಂತೆ ಕೋರಿ ಪಕ್ಷದ ಉಚ್ಚಾಟಿತ ನಾಯಕ ಒ.ಪನ್ನೀರಸೆಲ್ವಂ ಅವರ ಬಣದ ಶಾಸಕ ಪಿ.ಎಚ್.ಮನೋಜ್‌ ಪಾಂಡಿಯನ್‌ ಹಾಗೂ ಇತರರು ಅರ್ಜಿ ಸಲ್ಲಿಸಿದ್ದರು.

ಇವುಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಕುಮಾರೇಶ್‌ ಬಾಬು ನೇತೃತ್ವದ ಏಕಸದಸ್ಯ ನ್ಯಾಯಪೀಠ, ಉಭಯ ಬಣದವರು ಇದೇ 22ರೊಳಗೆ ವಾದ ಮಂಡನೆ ಪೂರ್ಣಗೊಳಿಸಿದ್ದೇ ಆದಲ್ಲಿ 24ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು.

ADVERTISEMENT

ಎಐಡಿಎಂಕೆಯ ’ಜನರಲ್ ಕೌನ್ಸಿಲ್’ ಪಕ್ಷದ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಮಿತಿಯಾಗಿದೆ. ಎಐಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರೊಬ್ಬರೇ ಇದರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರಿಂದ, ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿತ್ತು.

ಈ ಕುರಿತು ಮಾ.28ರಂದು ಹೈಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಸಂಸತ ವ್ಯಕ್ತ ಪಡಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಪಳನಿಸ್ವಾಮಿ, ಈ ವ್ಯಾಜ್ಯದಲ್ಲಿ ತಮಗೆ ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.