ಶಿವಸೇನಾ ಸಂಸದ ನರೇಶ್ ಮಹಾಸ್ಕೆ
ಚಿತ್ರಕೃಪೆ: X/@PTI
ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟವಾಗಿರುವ 'ಇಂಡಿಯಾ'ದ ಸಂಸದರನ್ನು ಮೊಘಲ್ ಸಾಮ್ರಾಟ ಔರಂಗಜೇಬನ ಅಭಿಮಾನಿಗಳು ಎಂದು ಕರೆಯಬೇಕು ಎಂದು ಶಿವಸೇನಾ ಸಂಸದ ನರೇಶ್ ಮಹಾಸ್ಕೆ ಲೋಕಸಭೆಯಲ್ಲಿ ಕೇಳಿಕೆ ನೀಡಿದ್ದಾರೆ. ಇದು ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
'ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025' ಕುರಿತ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಅದ ಮಿತ್ರ ಪಕ್ಷಗಳ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ನರೇಶ್, ಅವರ (ವಿರೋಧ ಪಕ್ಷಗಳ) ಆಡಳಿತವನ್ನು ಔರಂಗಜೇಬನ ಆಡಳಿತಕ್ಕೆ ಹೋಲಿಸಿದ್ದಾರೆ.
'ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಆಡಳಿತದ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ನಮ್ಮ ಸರ್ಕಾರವು ಸಮೃದ್ಧಿ ಸಾಧಿಸುವತ್ತ ಹೆಜ್ಜೆ ಇಟ್ಟಿದೆ. ಆದರೆ, ರೈತರ ಹಣವನ್ನು ದೋಚಿದ್ದ ಕಾಂಗ್ರೆಸ್, ಆಡಳಿತವನ್ನು ಭ್ರಷ್ಟಾಚಾರದ ತಾಣವನ್ನಾಗಿಸಿತ್ತು' ಎಂದು ದೂರಿದ್ದಾರೆ.
ವಿರೋಧ ಪಕ್ಷಗಳು ಔರಂಗಜೇಬನ ಮೇಲೆಯೇ ಕೇಂದ್ರೀಕೃತವಾಗಿವೆ ಎಂದೂ ಆರೋಪಿಸಿದ್ದಾರೆ.
'ಔರಂಗಜೇಬನು ಹಿಂದೂಗಳ ನಾಶಕ್ಕಾಗಿ ಜಿಜ್ಯಾ (ಜಿಜಿಯಾ) ತೆರಿಗೆ ವಿಧಿಸಿದ್ದ ಹಾಗೆಯೇ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಸರ್ಕಾರವು ಹಗರಣಗಳ ಮೂಲಕ ಮಹಾರಾಷ್ಟ್ರವನ್ನು ಲೂಟಿ ಮಾಡಿದೆ' ಎಂದು ದೂರಿದ್ದಾರೆ.
ಇದೇ ವೇಳೆ ಅವರು, ಇಂಡಿಯಾ ಮೈತ್ರಿಕೂಟದ ಸದಸ್ಯರನ್ನು ಔರಂಗಜೇಬನ ಅಭಿಮಾನಿಗಳು ಎಂದು ಕರೆಯಬೇಕು ಎಂದು ಪ್ರತಿಪಾದಿಸಿದ್ದಾರೆ.
ಈ ಹೇಳಿಕೆಯು ಪ್ರತಿಪಕ್ಷಗಳ ನಾಯಕರು ಕೆರಳುವಂತೆ ಮಾಡಿತು. 'ಔರಂಗಜೇಬನಿಗೂ, ಮಸೂದೆಗೂ ಏನು ಸಂಬಂಧ?' ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಸಂಸದ ಅರವಿಂದ್ ಸಾವಂತ್ ಪ್ರಶ್ನಿಸಿದ್ದಾರೆ. ಇತರ ನಾಯಕರೂ ನರೇಶ್ ವಿರುದ್ಧ ಕಿಡಿಕಾರಿದ್ದಾರೆ.
ಗ್ರಾಮೀಣ ಆಡಳಿತ ಸಂಸ್ಥೆಯನ್ನು ವಿವಿ ಆಗಿಸಲು ಮಸೂದೆ
ಗುಜರಾತ್ನ ಆನಂದ್ ಜಿಲ್ಲೆಯಲ್ಲಿರುವ ಗ್ರಾಮೀಣ ಆಡಳಿತ ಸಂಸ್ಥೆಯನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವನ್ನಾಸುವ ನಿಟ್ಟಿನಲ್ಲಿ 'ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ, 2025' ಅನ್ನು ಪರಿಚಯಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.