ADVERTISEMENT

ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿಗೆ ಅವಕಾಶ -

ಪಿಟಿಐ
Published 12 ಮಾರ್ಚ್ 2020, 19:40 IST
Last Updated 12 ಮಾರ್ಚ್ 2020, 19:40 IST
ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ   

ನವದೆಹಲಿ: ಕಲ್ಲಿದ್ದಲ್ಲು ಗಣಿ ಗುತ್ತಿಗೆ ಹಂಚಿಕೆಯ ಮೇಲೆ ಇದ್ದ ನಿರ್ಬಂಧವನ್ನು ತೆಗೆದುಹಾಕುವ ‘ಖನಿಜ ಕಾನೂನುಗಳ (ತಿದ್ದುಪಡಿ) ಮಸೂದೆ’ಗೆ ಗುರುವಾರ ರಾಜ್ಯಸಭೆಯ ಅನುಮೋದನೆ ದೊರೆತಿದೆ. ಈ ಮಸೂದೆಯು ಕಾಯ್ದೆಯಾದರೆ ವಿದೇಶಿ ಕಂಪನಿಗಳಿಗೂ ಕಲ್ಲಿದ್ದಲು ಗಣಿ ಗುತ್ತಿಗೆ ಹಂಚಿಕೆಗೆ ಅವಕಾಶ ಸಿಗಲಿದೆ.

ಮಸೂದೆಯನ್ನು ಮತಕ್ಕೆ ಹಾಕಿದಾಗ 83 ಸದಸ್ಯರು ಮಸೂದೆಯ ಪರ ಮತ್ತು 12 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು.

‘ಈ ಕಾನೂನು ಜಾರಿಗೆ ಬಂದರೆ, ಕಲ್ಲಿದ್ದಲು ವಲಯದಲ್ಲಿ ಭಾರಿ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹರಿದುಬರಲಿದೆ. ಇದರಿಂದ ದೇಶದ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ’ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಸೂದೆ ಮೇಲಿನ ಚರ್ಚೆಯ ವೇಳೆ ಹೇಳಿದರು.

ADVERTISEMENT

‘ಭಾರತವು ಈಗ ಪ್ರತಿವರ್ಷ ₹ 2.7 ಲಕ್ಷ ಕೋಟಿ ಮೌಲ್ಯದಷ್ಟು ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ,ಜಗತ್ತಿನ ಎಲ್ಲಾ ರಾಷ್ಟ್ರಕ್ಕಿಂತ ಅತ್ಯಂತ ಹೆಚ್ಚು ಕಲ್ಲಿದ್ದಲು ನಿಕ್ಷೇಪವನ್ನು ಭಾರತ ಹೊಂದಿದೆ. ಇದನ್ನು ಬಳಸಿಕೊಳ್ಳದೇ ಹೋದರೆ, ಆ ನಿಕ್ಷೇಪವೆಲ್ಲವೂ ವ್ಯರ್ಥವಾಗಿ ಹೋಗುತ್ತದೆ. ಈಗ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಆಮದು ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಜತೆಗೆ ವಿದ್ಯುತ್ ಉತ್ಪಾದನೆಗೆ ಡೀಸೆಲ್ ಬಳಕೆಯನ್ನೂ ತಗ್ಗಿಸಬಹುದು’ ಎಂದು ಅವರು ವಿವರಿಸಿದರು.

2020ರ ಖನಿಜ ಕಾನೂನುಗಳ (ತಿದ್ದುಪಡಿ) ಸುಗ್ರೀವಾಜ್ಞೆಯ ಬದಲಿಗೆ ಈ ಮಸೂದೆ ಜಾರಿಗೆ ಬರಲಿದೆ.

**

ಕೋಲ್ ಇಂಡಿಯಾದ ಉತ್ಪಾದನೆ ಕುಸಿದಿದೆ. ಕಂಪನಿಯ ಪುನಶ್ಚೇತನಕ್ಕೆ ಹಲವು ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಪ್ರಲ್ಹಾದ ಜೋಶಿ , ಕಲ್ಲಿದ್ದಲು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.