ನಿಶಿಕಾಂತ್ ದುಬೆ
ನವದೆಹಲಿ: ‘ಭಾರತದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ತಪ್ಪು ಮಾಹಿತಿಗಾಗಿ ಸಾಮಾಜಿಕ ಜಾಲತಾಣ ವೇದಿಕೆಗಳ ಮಾಲೀಕತ್ವದ ಸಂಸ್ಥೆ ‘ಮೆಟಾ’ ಕ್ಷಮೆ ಕೋರಬೇಕು’ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಒತ್ತಾಯಿಸಿದ್ದಾರೆ.
ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಜಂಟಿ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ದುಬೆ, ‘ಲೋಕಸಭೆ ಚುನಾವಣೆ ಕುರಿತಂತೆ ಮೆಟಾ ಅಧ್ಯಕ್ಷರ ಹೇಳಿಕೆ ಹಿನ್ನೆಲೆಯಲ್ಲಿ ಸಮಿತಿಯು ಅವರಿಗೆ ಸಮನ್ಸ್ ಜಾರಿಗೊಳಿಸಲಿದೆ’ ಎಂದು ತಿಳಿಸಿದರು.
‘ಅಸಮರ್ಪಕ ಮಾಹಿತಿಗಾಗಿ ಸಮಿತಿ ಮೆಟಾಗೆ ಸಮನ್ಸ್ ನೀಡಲಿದೆ. ಪ್ರಜಾಪ್ರಭುತ್ವ ರಾಷ್ಟ್ರದ ವರ್ಚಸ್ಸಿಗೆ ಧಕ್ಕೆ ಆಗುವಂತಹ ತಪ್ಪು ಮಾಹಿತಿಗಳ ಹಂಚಿಕೆ ಸಲ್ಲದು. ಈ ತಪ್ಪಿಗಾಗಿ ಮೆಟಾ ಭಾರತದ ಸಂಸತ್ತು ಮತ್ತು ದೇಶದ ಜನರ ಕ್ಷಮೆ ಕೋರಬೇಕು’ ಎಂದು ಪ್ರತಿಪಾದಿಸಿದರು.
ಎಕ್ಸ್ನಲ್ಲಿ ಅವರು ಈ ಕುರಿತು ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಭವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
‘ಮೆಟಾ ಮುಖ್ಯಸ್ಥ ಜುಕರ್ಬರ್ಗ್ ಅವರಿಂದಲೇ ತಪ್ಪು ಮಾಹಿತಿ ರವಾನೆ ಆಗುವುದು ಸರಿಯಲ್ಲ. ಸತ್ಯ ಮತ್ತು ವಿಶ್ವಾಸಾರ್ಹತೆ ಎತ್ತಿಹಿಡಿಯೋಣ’ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.