ಲಖನೌ: ಸೈದ್ಧಾಂತಿಕವಾಗಿ ವಿಭಿನ್ನವಾದ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ನಮ್ಮ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ₹1 ಕೋಟಿ ನೀಡಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಇಂದು ಅಯೋಧ್ಯೆಗೆ ಆಗಮಿಸಿದ್ದಾರೆ. ಅಲ್ಲಿ ಸಭೆಯೊಂದರಲ್ಲಿ ಮಾತನಾಡಿ, ನಾನು ಬಿಜೆಪಿಯಿಂದ ಬೇರ್ಪಟ್ಟಿದ್ದೇನೆ ಹೊರತು ಹಿಂದುತ್ವದಿಂದ ಅಲ್ಲ. ಹಿಂದುತ್ವವೇ ಬೇರೆ ವಿಚಾರ ಹಾಗಾಗಿ ನಾನು ಅದರಿಂದ ಬೇರ್ಪಟ್ಟಿಲ್ಲ ಎಂದು ಹೇಳಿದರು.
ಅಲ್ಲಿ ಅವರು ಆರತಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೋವಿಡ್-19 ಭೀತಿಯಿಂದಾಗಿ ಅದನ್ನು ರದ್ದುಪಡಿಸಲಾಯಿತು.
ಕೊನೆಯ ಬಾರಿಗೆ ನಾನು ಇಲ್ಲಿ ಬಂದಿದ್ದಾಗ, ರಾಮ ಮಂದಿರದ ವಿಚಾರವು ಗೊಂದಲದಲ್ಲಿತ್ತು. ನಾನು 2018ರ ನವೆಂಬರ್ನಲ್ಲಿ ನಾನಿಲ್ಲಿಗೆ ಬಂದಿದ್ದೆ. ಆದರೆ 2019ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ನಾನು ಕೂಡ ಮುಖ್ಯಮಂತ್ರಿಯಾಗಿದ್ದೇನೆ. ಇದೀಗ ನಾನು ಮೂರನೇ ಬಾರಿಗೆ ಇಲ್ಲಿಗೆ ಬಂದಿದ್ದೇನೆ ಮತ್ತು ನಾನು ಇಲ್ಲಿಗೆ ಬಂದಾಗಲೆಲ್ಲಾ ನನಗೆ ಅದು ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ತಿಳಿಸಿದರು.
ನಿನ್ನೆಯಷ್ಟೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದೆ. ನಾವು ದೇವಾಲಯವನ್ನು ಖಂಡಿತವಾಗಿಯೂ ನಿರ್ಮಿಸುತ್ತೇವೆ ಎಂದು ಹೇಳಿದ್ದೇನೆ ಮತ್ತು ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಲು ಬರುವ ರಾಮನ ಭಕ್ತರಿಗೆ ಅಯೋಧ್ಯೆಯಲ್ಲಿ ಸ್ವಲ್ಪ ಜಾಗವನ್ನು ನೀಡುವಂತೆ ವಿನಂತಿಸುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.