ಮುಂಬೈ: ಕೋರೆಗಾಂವ್ ಭೀಮಾ ಗಲಭೆಯ ವಿಚಾರಣೆ ನಡೆಸುತ್ತಿರುವ ಆಯೋಗವು, ಎನ್ಸಿಪಿ ಮುಖಂಡ ಶರದ್ ಪವಾರ್ ಅವರಿಗೆ ಸಮನ್ಸ್ ನೀಡಿದ್ದು, 2018ರ ಘಟನೆಯ ಸಾಕ್ಷಿಯಾಗಿ ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಿದೆ.
ಈವರೆಗೂ ಪುಣೆಯಲ್ಲೇ ವಿಚಾರಣೆ ನಡೆಸುತ್ತಿದ್ದ ಆಯೋಗವು ಕೋವಿಡ್–19 ಭೀತಿಯಿಂದಾಗಿ ಮಾರ್ಚ್ ಅಂತ್ಯದವರೆಗೆ ವಿಚಾರಣೆಯನ್ನು ನಡೆಸದಿರಲು ತೀರ್ಮಾನಿಸಿದೆ. ಆ ಬಳಿಕ ಮುಂಬೈಯಲ್ಲಿ ವಿಚಾರಣೆ ನಡೆಸಲಿದೆ. ಆದ್ದರಿಂದ ಪವಾರ್ ಅವರು ಮುಂಬೈಯಲ್ಲೇ ಆಯೋಗದ ಮುಂದೆ ಹಾಜರಾಗಬೇಕಾಗಿದೆ. ಏಪ್ರಿಲ್ 4ರಂದು ಅವರು ಆಯೋಗದ ಮುಂದೆ
ಹಾಜರಾಗಲಿದ್ದಾರೆ.
ಪವಾರ್ ಅಲ್ಲದೆ, ಪುಣೆ ಗ್ರಾಮೀಣ ಎಸ್ಪಿ ಸವೂಜ್ ಹಕ್, ಹೆಚ್ಚುವರಿ ಎಸ್ಪಿ ಸಂದೀಪ್ ಪಖಳೆ, ಪುಣೆಯ ಹೆಚ್ಚುವರಿ ಆಯುಕ್ತ ರವೀಂದ್ರ ಸೆನ್ಗಾಂವ್ಕರ್ ಹಾಗೂ ಜಿಲ್ಲಾಧಿಕಾರಿ ಸೌರಭ್ ರಾವ್ ಅವರಿಗೂ ಸಮನ್ಸ್ ನೀಡಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ವಿ.ವಿ. ಪಳನಿಟ್ಕರ್ ತಿಳಿಸಿದ್ದಾರೆ.
‘ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವರೂ ಆಗಿರುವ ಪವಾರ್ ಅವರು ಏಪ್ರಿಲ್ 4ರಂದು ವಿಚಾರಣೆಗೆ ಹಾಜರಾಗುವರು. ಘಟನೆಯ ಒಬ್ಬ ಸಾಕ್ಷಿಯಾಗಿ ಅವರು ವಿಚಾರಣೆ ಎದುರಿಸಲಿದ್ದಾರೆ’ ಎಂದು ತನಿಖಾ ದಳದ ವಕೀಲ ಆಶಿಷ್ ಸಾತಪುತೆ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪವಾರ್ ಅವರ ಪಾತ್ರ ಬಹುಮುಖ್ಯವಾಗಿದೆ. ಈ ಕಾರಣದಿಂದ ಆಯೋಗದ ಮುಂದೆ ಅವರು ನೀಡುವ ಹೇಳಿಕೆಗೆವಿಶೇಷ ಮಹತ್ವ ನೀಡಲಾಗುತ್ತಿದೆ. ಭೀಮಾ ಕೋರೆಗಾಂವ್ ಘಟನೆಯ ವಿಚಾರಣೆಯನ್ನು ಎನ್ಐಎಗೆ ವಹಿಸುವುದನ್ನು ಎನ್ಸಿಪಿ ವಿರೋಧಿಸಿತ್ತು.ಹಾಗಿದ್ದರೂ, ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಕಳೆದ ತಿಂಗಳಲ್ಲಿ ಪ್ರಕರಣವನ್ನು ಎನ್ಐಎಗೆ ಒಪ್ಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.