ADVERTISEMENT

ಎಲ್‌ಇಟಿ ಉಗ್ರರಿಗೆ ಆಶ್ರಯ: ಬಿಜೆಪಿ ವಿರುದ್ಧ ತನಿಖೆಗೆ ಒತ್ತಾಯ

ಪಿಟಿಐ
Published 5 ಜುಲೈ 2022, 12:22 IST
Last Updated 5 ಜುಲೈ 2022, 12:22 IST
ಜಮ್ಮುವಿನಲ್ಲಿ ಮಂಗಳವಾರ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ನಿಯಂತ್ರಿಸಿದರು – ಪಿಟಿಐ ಚಿತ್ರ
ಜಮ್ಮುವಿನಲ್ಲಿ ಮಂಗಳವಾರ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ನಿಯಂತ್ರಿಸಿದರು – ಪಿಟಿಐ ಚಿತ್ರ   

ಜಮ್ಮು: ಲಷ್ಕರ್-ಎ-ತಯಬಾ ಸಂಘಟನೆಯ (ಎಲ್‌ಇಟಿ) ಭಯೋತ್ಪಾದಕ ತಾಲಿಬ್ ಹುಸೇನ್ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿರುವ ಪೀಪಲ್ಸ್‌ ಡೆಮಕ್ರಾಟಿಕ್‌ ಪಕ್ಷವು (ಪಿಡಿಪಿ), ಬಿಜೆಪಿ ನಾಯಕತ್ವದ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿತು.

ಪಿಡಿಪಿಯ ಪ್ರಧಾನ ಕಾರ್ಯದರ್ಶಿ ಅಮರಿಕ್ ಸಿಂಗ್ ರೀನ್ ನೇತೃತ್ವದಲ್ಲಿ ಪಿಡಿಪಿ ಕಾರ್ಯಕರ್ತರು ಜಮ್ಮುವಿನ ಗಾಂಧಿನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಮುಂಬದಿ ಪ್ರತಿಭಟನೆ ನಡೆಸಿದರು.ಅಲ್ಲದೇ ತಾಲಿಬ್‌ ಹಾಗೂ ಆತನ ಸಹಚರ ಫೈಸಲ್‌ ಅಹ್ಮದ್‌ ದಾರ್‌ನ ಪೂರ್ವಾಪರಗಳನ್ನು ಪರಿಶೀಲಿಸದೆ ಅವರ ಪ್ರವೇಶವನ್ನು ಬಿಜೆಪಿ ಸುಗಮಗೊಳಿಸಿದೆ ಎಂದೂ ಆರೋಪಿಸಿದರು.

ಹುಸೇನ್, ಬಿಜೆಪಿ ನಾಯಕರ ಜೊತೆಗಿರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಹುಸೇನ್ ಪಕ್ಷದ ಸಕ್ರಿಯ ಸದಸ್ಯ ಎಂಬ ಆರೋಪವನ್ನು ಬಿಜೆಪಿ ನಿರಾಕರಿಸಿದ್ದು, ಇದು ಬಿಜೆಪಿಯ ನಾಯಕರನ್ನು ಗುರಿಯಾಗಿಸಿ ಪಾಕಿಸ್ತಾನ ಮಾಡಿರುವ ಪಿತೂರಿಯ ಭಾಗ. ಹುಸೇನ್‌ ತಾನು ಸುದ್ದಿ ಸಂಸ್ಥೆಯೊಂದರ ವರದಿಗಾರ ಎಂದು ಪರಿಚಯಿಸಿಕೊಂಡು ಜಮ್ಮುವಿನ ಪಕ್ಷದ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಎಂದು ಬಿಜೆಪಿ ತಿಳಿಸಿದೆ.

ADVERTISEMENT

ಆದರೆ, ‘ಬಿಜೆಪಿ ನಾಯಕರು ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.ವಾಸ್ತವದಲ್ಲಿ ಹುಸೇನ್‌ ಬಿಜೆಪಿಯ ಸದಸ್ಯ ಹಾಗೂ ಬಿಜೆಪಿಯ ಅಲ್ಪಸಂಖ್ಯಾತ ಸಮುದಾಯದ ಐಟಿ ಮತ್ತು ಸಾಮಾಜಿಕ ಮಾಧ್ಯಮದ ಮುಖ್ಯಸ್ಥ’ ಎಂದು ಪಿಡಿಪಿ ವಕ್ತಾರ ವರೀಂದರ್ ಸಿಂಗ್ ಸೋನು ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಭೆಯಲ್ಲಿ ಹುಸೇನ್ ಹಾಜರಿದ್ದದ್ದನ್ನು ಪ್ರಶ್ನಿಸಿದ ಸೋನು, ‘ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಸೋರಿಕೆಯಾಗಿರುವ ಮಾಹಿತಿಗಳನ್ನು ಪರಿಶೀಲಿಸಿದರೆ, ಬಿಜೆಪಿಯಲ್ಲಿ ಹುಸೇನ್‌ ಇರುವ ಸಂಗತಿ ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.