
TN CM announces hike in pension, retirement benefits for noon meal organisers, Anganwadi workers
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, ಮಧ್ಯಾಹ್ನದ ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯತ್ ಕಾರ್ಯದರ್ಶಿಗಳ ಪಿಂಚಣಿ ಹೆಚ್ಚಳವನ್ನು ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಮುಕ್ತಾಯಗೊಳಿಸಿದ ಸಿಎಂ, ಮಧ್ಯಾಹ್ನದ ಬಿಸಿಯೂಟ ನೌಕರರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಿಂಚಣಿಯನ್ನು ಕ್ರಮವಾಗಿ ₹1,200 ಮತ್ತು ₹1,100 ಹೆಚ್ಚಿಸಲಾಗಿದ್ದು, ಪಂಚಾಯತ್ ಕಾರ್ಯದರ್ಶಿಗಳ ಪಿಂಚಣಿಯನ್ನು ತಿಂಗಳಿಗೆ ₹2,000ದಿಂದ ₹3,400ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಅವರ ನಿವೃತ್ತಿ ಸೌಲಭ್ಯಗಳನ್ನು ಪ್ರಸ್ತುತ ₹1 ಲಕ್ಷ ದಿಂದ ₹2 ಲಕ್ಷಕ್ಕೆ ದ್ವಿಗುಣಗೊಳಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಇದಲ್ಲದೆ, ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅರಣ್ಯ ಮುಂಚೂಣಿ ಸಿಬ್ಬಂದಿಯ ಪಿಂಚಣಿಯನ್ನು ₹2,000ದಿಂದ ₹3,200ಕ್ಕೆ ಹೆಚ್ಚಿಸಲಾಗುವುದು. ಅವರ ನಿವೃತ್ತಿ ಸೌಲಭ್ಯಗಳನ್ನು ₹2 ಲಕ್ಷಕ್ಕೆ ದ್ವಿಗುಣಗೊಳಿಸಲಾಗುವುದು. ಅಂಗನವಾಡಿ ಸಹಾಯಕಿಯರ, ಅಡುಗೆಯವರ, ಅಡುಗೆ ಸಹಾಯಕಿಯರ ಮತ್ತು ಕಸ ಗುಡಿಸುವವರ ಪಿಂಚಣಿಯನ್ನು₹2,000ದಿಂದ ₹3,000ಕ್ಕೆ ಹೆಚ್ಚಿಸಲಾಗುವುದು. ಅವರ ನಿವೃತ್ತಿ ಸೌಲಭ್ಯಗಳನ್ನು ₹50,000ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.
ಹೆಚ್ಚುವರಿಯಾಗಿ, 'ಸ್ಟಾಲಿನ್ ವಿಥ್ ಯು' ಶಿಬಿರಗಳ ಮೂಲಕ ಸ್ವೀಕರಿಸಿದ ವಿನಂತಿಗಳ ಆಧಾರದ ಮೇಲೆ 1.80 ಲಕ್ಷ ಜನರಿಗೆ ಮಾಸಿಕ ಪಿಂಚಣಿ ನೀಡಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ. ಈ ಯೋಜನೆಯನ್ನು ಫೆಬ್ರುವರಿ 4ರಂದು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ, ತಮಿಳುನಾಡಿನಲ್ಲಿ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ರೈತರು, ಕೃಷಿ ಕಾರ್ಮಿಕರು, 50 ವರ್ಷಕ್ಕಿಂತ ಮೇಲ್ಪಟ್ಟ ಅವಿವಾಹಿತ ಮಹಿಳೆಯರು ಸೇರಿದಂತೆ 33.6 ಲಕ್ಷ ಮಂದಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ. ಈಗ, ಹೆಚ್ಚುವರಿಯಾಗಿ 1.80 ಲಕ್ಷ ಜನರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.