ADVERTISEMENT

ಕೇರಳದ ಹೊರಗೆ ಜನಿಸಿದ್ದರೂ ‘ಸ್ಥಳೀಯರೇ’: ಹೈಕೋರ್ಟ್‌

’ಸಾಮಾಜಿಕ ನಿಯಮ, ಮೌಲ್ಯಗಳನ್ನು ಅಳವಡಿಸಿಕೊಂಡಿರಬೇಕು’

ಪಿಟಿಐ
Published 30 ಜುಲೈ 2021, 7:55 IST
Last Updated 30 ಜುಲೈ 2021, 7:55 IST
...
...   

ಕೊಚ್ಚಿ: ಕೇರಳದ ನಿವಾಸಿಗಳು ಬೇರೆ ರಾಜ್ಯದಲ್ಲಿ ಜನಿಸಿದ್ದರೂ ಇಲ್ಲಿನ ನಿಯಮಾವಳಿಗಳು ಮತ್ತು ಮೌಲ್ಯಗಳನ್ನು ಸಾಮಾಜಿಕವಾಗಿ ಅಳವಡಿಸಿಕೊಂಡಿದ್ದರೆ ‘ಸ್ಥಳೀಯರು’ ಎನ್ನುವ ಪ್ರಮಾಣಪತ್ರ ಪಡೆದುಕೊಳ್ಳಲು ಅರ್ಹರಿದ್ದಾರೆ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ಇದರಿಂದ, ಶಿಕ್ಷಣ ಮತ್ತು ಇತರ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದೆ.

ಕೇರಳದಿಂದ ಹೊರಗೆ ಜನಿಸಿದವರಿಗೆ ‘ಸ್ಥಳೀಯರು’ ಎನ್ನುವ ಪ್ರಮಾಣಪತ್ರ ನೀಡಲು ವ್ಯಕ್ತಿಯ ಅಥವಾ ವ್ಯಕ್ತಿಯ ಪೋಷಕರ ಜನ್ಮಸ್ಥಳವೇ ಏಕೈಕ ಮಾನದಂಡವಾಗಬಾರದು. ವ್ಯಕ್ತಿಯು ರಾಜ್ಯದ ಜತೆಗಿನ ಹೊಂದಿರುವ ‘ಸಾಮಾಜಿಕ ಹಿನ್ನೆಲೆ’ಯನ್ನು ಸಹ ಪರಿಗಣಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

ಉನ್ನತ ಶಿಕ್ಷಣ ಪಡೆಯಲು ’ಸ್ಥಳೀಯರು’ ಎನ್ನುವ ಪ್ರಮಾಣಪತ್ರ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 24 ವರ್ಷದ ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಪಿ.ಬಿ. ಸುರೇಶ್‌ ಕುಮಾರ್‌ ಈ ನಿರ್ದೇಶನ ನೀಡಿದ್ದಾರೆ.

ಮಹಿಳೆ ಮತ್ತು ಅವರ ಪೋಷಕರು ಕೇರಳದಲ್ಲಿ ಜನಿಸಿಲ್ಲ ಎನ್ನುವ ಕಾರಣಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ‘ಸ್ಥಳೀಯರು’ ಎನ್ನುವ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದರು.

ಅಧಿಕಾರಿಗಳ ನಿರ್ಧಾರವನ್ನು ತಿರಸ್ಕರಿಸಿದ ನ್ಯಾಯಾಲಯ, ಅರ್ಜಿದಾರರ ವಂಶಸ್ಥರು ರಾಜ್ಯದವರಲ್ಲ ಮತ್ತು ಅರ್ಜಿದಾರರು ಹೊರರಾಜ್ಯದಲ್ಲಿ ಜನಿಸಿದ್ದಾರೆ. ಆದರೆ, ಕೇರಳದಲ್ಲಿನ ಸಾಮಾಜಿಕ ವ್ಯವಸ್ಥೆಯ ನಿಯಮಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ಹೀಗಾಗಿ, ಇಂತಹ ವ್ಯಕ್ತಿಗಳನ್ನು ಕೇರಳಕ್ಕೆ ಸಂಬಂಧಿಸಿದವರು ಎಂದೇ ಪರಿಗಣಿಸಬೇಕು. ಹೀಗಾಗಿ, ಸ್ಥಳೀಯರು ಪ್ರಮಾಣ ‍ಪತ್ರ ನೀಡಬೇಕು ಎಂದು ನಿರ್ದೇಶನ ನೀಡಿದೆ.

ಮಹಿಳೆಯ ಪೋಷಕರು ತಮಿಳುನಾಡಿನ ತೂತುಕುಡಿಯವರಾಗಿದ್ದು, ಇಲ್ಲಿಯೇ ನೆಲೆಸಿದ್ದಾರೆ. ಹೆರಿಗೆ ಕಾರಣಕ್ಕೆ ಮಹಿಳೆಯ ತಾಯಿ ತವರಿಗೆ ತೆರಳಿದ್ದರು. ಹೀಗಾಗಿ, ಮಹಿಳೆ ತೂಕುಕುಡಿಯಲ್ಲಿ ಜನಿಸಿದ್ದರು. ಆದರೆ, ಕೇರಳದಲ್ಲೇ ಬೆಳೆದ ಮಹಿಳೆ, ಶಾಲೆ ಮತ್ತು ಪದವಿಯನ್ನು ಸಹ ಇಲ್ಲಿಯೇ ಪಡೆದಿದ್ದರು. ನಂತರ ಉನ್ನತ ಶಿಕ್ಷಣಕ್ಕಾಗಿ ‘ಸ್ಥಳೀಯರು’ ಎನ್ನುವ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.