ADVERTISEMENT

ಎಲೂರಿನಲ್ಲಿ ರಹಸ್ಯ ಕಾಯಿಲೆ: 22 ಜನರು ಅಸ್ವಸ್ಥ

ಪಿಟಿಐ
Published 22 ಜನವರಿ 2021, 17:01 IST
Last Updated 22 ಜನವರಿ 2021, 17:01 IST
ಕಳೆದ ಡಿಸೆಂಬರ್‌ನಲ್ಲಿ ಎಲೂರಿನಲ್ಲಿ ನೂರಕ್ಕೂ ಅಧಿಕ ಜನರು ಏಕಾಏಕಿ ಅಸ್ವಸ್ಥಗೊಂಡಿದ್ದ ಸಂದರ್ಭದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ದೃಶ್ಯ –ಪಿಟಿಐ ಚಿತ್ರ
ಕಳೆದ ಡಿಸೆಂಬರ್‌ನಲ್ಲಿ ಎಲೂರಿನಲ್ಲಿ ನೂರಕ್ಕೂ ಅಧಿಕ ಜನರು ಏಕಾಏಕಿ ಅಸ್ವಸ್ಥಗೊಂಡಿದ್ದ ಸಂದರ್ಭದಲ್ಲಿ ಪ್ರಜ್ಞೆತಪ್ಪಿ ಬಿದ್ದಿದ್ದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ದೃಶ್ಯ –ಪಿಟಿಐ ಚಿತ್ರ   

ಅಮರಾವತಿ(ಆಂಧ್ರಪ್ರದೇಶ): ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ಹಾಗೂ ಸಮೀಪದ ಗ್ರಾಮವೊಂದರಲ್ಲಿ ಶುಕ್ರವಾರ ಕನಿಷ್ಠ 22 ಜನರು ಏಕಾಏಕಿ ಅಸ್ವಸ್ಥರಾಗಿದ್ದು, ಇದರ ಹಿಂದೆ ಪಿತೂರಿಯ ಕೈವಾಡವಿದೆ ಎಂದು ಉಪಮುಖ್ಯಮಂತ್ರಿ ಎ.ಕೆ.ಕೆ.ಶ್ರೀನಿವಾಸ್‌ ಸಂಶಯ ವ್ಯಕ್ತಪಡಿಸಿದ್ದಾರೆ.

ಕಳೆದ ಡಿಸೆಂಬರ್‌ ಮೊದಲ ವಾರದಲ್ಲಿ ಎಲೂರು ನಗರದಲ್ಲಿ ನೂರಕ್ಕೂ ಅಧಿಕ ಜನರು ಹೊಟ್ಟೆ ತೊಳಸುವಿಕೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ 22 ಜನರು ಅಸ್ವಸ್ಥರಾಗಿದ್ದಾರೆ. ಜಿಲ್ಲೆಯ ಪೂಲ್ಲ ಪ್ರದೇಶಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬ ಸದಸ್ಯರ ಜೊತೆ ಮಾತುಕತೆ ನಡೆಸಿದ ಶ್ರೀನಿವಾಸ್‌, ಈ ರಹಸ್ಯ ಕಾಯಿಲೆಯ ಹಿಂದೆ ಸಂಚಿನ ಸಾಧ್ಯತೆ ಇದೆ. ಜನರು ಹೇಳುವುದನ್ನು ಕೇಳಿದರೆ ನಮಗೂ ಸಂಶಯವಿದೆ. ಆದರೆ ಈ ಕುರಿತು ಖಚಿತವಾಗಿ ಹೇಳಲು ಸಾಧ್ಯವಿಲ್ಲ’ ಎಂದರು.

22 ಜನರು ಏಕಾಏಕಿ ಪ್ರಜ್ಞೆತಪ್ಪಿ ಬಿದ್ದಿದ್ದು, ಅವರ ಬಾಯಿಯಿಂದ ನೊರೆ ಬಂದಿದೆ ಹಾಗೂ ಹಲವರು ತಲೆಸುತ್ತಿನ ಬಗ್ಗೆ ತಿಳಿಸಿದ್ದಾರೆ. ಈ ಪೈಕಿ ಚಿಕಿತ್ಸೆಯ ಬಳಿಕ ಆರು ಜನರನ್ನು ಮನೆಗೆ ಕಳುಹಿಸಲಾಗಿದ್ದು, 15 ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬರನ್ನು ಪೂಲ್ಲ ಮಂಡಲ್‌ನಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಪ್ರಜ್ಞೆತಪ್ಪಿ ಬಿದ್ದವರ ಮನೆಯಿಂದ ನೀರು ಹಾಗೂ ಆಹಾರದ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಜೊತೆಗೆ ಸ್ಥಳೀಯ ಹೋಟೆಲ್‌ ಹಾಗೂ ತರಕಾರಿ ಮಾರುಕಟ್ಟೆಯಿಂದಲೂ ಮಾದರಿ ಸಂಗ್ರಹಿಸಲಾಗಿದೆ. ಮಾಂಸ, ಹಾಲು, ಅಕ್ಕಿ ಹಾಗೂ ಭತ್ತದ ಬೆಳೆಗೆ ಬಳಸುವ ರಾಸಾಯನಿಕಗಳ ಮಾದರಿಯನ್ನೂ ಸಂಗ್ರಹಿಸಿ ಪರಿಶೀಲನೆಗೆ ರವಾನಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್‌ ದಾಸ್‌ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌ ಸಿಂಘಲ್‌ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.