ADVERTISEMENT

ಬಡತನ, ನಿರುದ್ಯೋಗದಿಂದ ಬೇಸತ್ತು ಜನರು ಮಹಾನಗರಗಳಿಗೆ ವಲಸೆ ಹೋಗ್ತಿದ್ದಾರೆ: ಗಡ್ಕರಿ

ಪಿಟಿಐ
Published 4 ಫೆಬ್ರುವರಿ 2025, 11:26 IST
Last Updated 4 ಫೆಬ್ರುವರಿ 2025, 11:26 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ನವದೆಹಲಿ: ಗ್ರಾಮೀಣ ಪ್ರದೇಶಗಳ ಜನರು ಬಡತನ ಮತ್ತು ನಿರುದ್ಯೋಗದಿಂದ ಬೇಸತ್ತು ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ಮೆಟ್ರೊ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಗರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶದ ಜನರು ತಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದ ಕಾರಣ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

‘ಬಡತನ, ನಿರುದ್ಯೋಗದಿಂದಾಗಿ ಗ್ರಾಮೀಣ ಭಾಗದ ಜನರು ಇಂದು ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಬೆಂಗಳೂರಿನಂತಹ ಮೆಟ್ರೊ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಮಹಾನಗರಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ನೋಡುತ್ತಿದ್ದೇವೆ’ ಎಂದಿದ್ದಾರೆ.

ADVERTISEMENT

ದೇಶದಲ್ಲಿ ಫ್ಲೆಕ್ಸ್ ಎಂಜಿನ್ ವಾಹನಗಳು ಬರುತ್ತಿವೆ. ಹಾಗೆಯೇ ಎಥೆನಾಲ್ ಪಂಪ್‌ಗಳನ್ನು ತೆರೆಯಲಾಗುತ್ತಿದೆ. ಈ ಕ್ರಮಗಳಿಂದ ರೈತರ ಆದಾಯ ದ್ವಿಗುಣಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೃಷಿ ಎಲ್ಲರೂ ಬೆಂಬಲಿಸುವ ಕ್ಷೇತ್ರವಾಗಿದೆ. ಈ ಹಿಂದೆ ನಾವು ರೈತರನ್ನು ‘ಅನ್ನದಾತ’ ಎಂದು ಕರೆಯುತ್ತಿದ್ದೆವು. ಆದರೆ, ನಮ್ಮ ಸರ್ಕಾರವು ರೈತರನ್ನೂ ‘ಉರ್ಜಾ ದಾತ’ ಮಾಡಿದೆ ಎಂದು ಅವರು ಹೇಳಿದ್ದಾರೆ.

‘ಹೈಡ್ರೋಜನ್ ಭವಿಷ್ಯದ ಇಂಧನವಾಗಿದೆ. ಹೈಡ್ರೋಜನ್ ಇಂಧನ ರಫ್ತುದಾರರಾಗುವುದು ನಮ್ಮ ಸರ್ಕಾರದ ಕನಸ್ಸಾಗಿದೆ’ ಎಂದಿದ್ದಾರೆ.

ಏಕರೂಪದ ಟೋಲ್ ಜಾರಿಗೆ ಚಿಂತನೆ: ನಿತಿನ್‌ ಗಡ್ಕರಿ

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಅನುಕೂಲಕ್ಕಾಗಿ ಏಕರೂಪದ ಟೋಲ್‌ ನೀತಿ ಜಾರಿಗೆ ತರಲು ರಸ್ತೆ ಸಾರಿಗೆ ಸಚಿವಾಲಯ ಕಾರ್ಯನಿರತವಾಗಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

‘ಪಿಟಿಐ’ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆಯ ಸ್ಥಿತಿಗತಿ ಬಗ್ಗೆ ವ್ಯಕ್ತಪಡಿಸುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಆಯಾ ರಸ್ತೆಗಳ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.