ಚೆನ್ನೈ/ನವದೆಹಲಿ: ದೆಹಲಿಯಲ್ಲಿ ತಬ್ಲೀಗ್ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ಬೇರೆ ಬೇರೆ ವಿಮಾನ ನಿಲ್ದಾಣಗಳಿಂದ ತಾಯ್ನಾಡಿಗೆ ಮರಳುತ್ತಿದ್ದ ಒಟ್ಟು 18 ಜನ ಮಲೇಷ್ಯಾ ಪ್ರಜೆಗಳನ್ನು ಭಾನುವಾರ ತಡೆ ಹಿಡಿಯಲಾಯಿತು.
10 ಜನರನ್ನು ಚೆನ್ನೈ ಹಾಗೂ 8 ಮಂದಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದರು. ಇಲ್ಲಿ ಸಿಲುಕಿದ್ದ ತನ್ನ ಪ್ರಜೆಗಳನ್ನು ಕರೆಕೊಂಡು ಬರಲು ಮಲೇಷ್ಯಾ ವ್ಯವಸ್ಥೆ ಮಾಡಿದ್ದ ವಿಮಾನಗಳಲ್ಲಿ ಪ್ರಯಾಣಿಸಲು ಈ 18 ಜನರು ಯತ್ನಿಸಿದ್ದರು.
‘ತೆಂಕಾಸಿ ಜಿಲ್ಲೆ ಸೇರಿದಂತೆ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಸಂಚರಿಸಿರುವ10 ಜನರು, ತಾವು ಕೈಗೊಂಡಿದ್ದ ಪ್ರವಾಸದ ಮಾಹಿತಿಯನ್ನು ಬಚ್ಚಿಟ್ಟು, ಕ್ವಾಲಾಲಂಪುರಕ್ಕೆಪ್ರಯಾಣಿಸಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಾಗ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.
ಎಲ್ಲರನ್ನೂ ಚೆನ್ನೈನ ಸ್ಟ್ಯಾನ್ಲೆ ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ದೆಹಲಿಯಿಂದ ಮುಂಬೈ ಮೂಲಕ ಕ್ವಾಲಾಲಂಪುರಕ್ಕೆ ಹೊರಟಿದ್ದ 8 ಜನರನ್ನು ವಿಮಾನದಿಂದ ಇಳಿಸಿ, ಕ್ವಾರಂಟೈನ್ ಕೇಂದ್ರದಲ್ಲಿ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದರು.
ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ವಿವಿಧ ದೇಶಗಳ ಪ್ರಜೆಗಳು, ತಬ್ಲೀಗ್ ಜಮಾತ್ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಗೃಹ ಸಚಿವಾಲಯ ಆರೋಪಿಸಿತ್ತು. ಅಲ್ಲದೇ, ತಬ್ಲೀಗ್ ಸದಸ್ಯರಾದ960 ಜನ ವಿದೇಶಿಯರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರ ವೀಸಾ ರದ್ದು ಮಾಡಿತ್ತು. ಇದರ ಬೆನ್ನಲ್ಲೇ, ವಲಸೆ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದರು.
ವಿದೇಶಿಯರ ಕಾಯ್ದೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಹಾಗೂ ಐಪಿಸಿಯವಿವಿಧ ಸೆಕ್ಷನ್ಗಳಡಿ ವಿದೇಶಿಯರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಗೃಹ ಸಚಿವಾಲಯ ಎಲ್ಲ ರಾಜ್ಯಗಳ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.