ADVERTISEMENT

ನಮ್ಮ ಫೋನ್‌ ಕರೆ ಕದ್ದಾಲಿಕೆಯಾಗುತ್ತಿದೆ: ಸಚಿನ್‌ ಪೈಲಟ್‌ ಬೆಂಬಲಿಗ ಶಾಸಕರ ಆರೋಪ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 9:25 IST
Last Updated 13 ಜೂನ್ 2021, 9:25 IST
ಕಾರ್ಯಕ್ರಮವೊಂದರಲ್ಲಿ ಸಚಿನ್‌ ಪೈಲಟ್‌
ಕಾರ್ಯಕ್ರಮವೊಂದರಲ್ಲಿ ಸಚಿನ್‌ ಪೈಲಟ್‌    

ಜೈಪುರ: ಕೆಲವು ಶಾಸಕರ ದೂರವಾಣಿ ಕರೆಗಳ ಕದ್ದಾಲಿಕೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಶಾಸಕ ವೇದ ಪ್ರಕಾಶ್‌ ಸೋಲಂಕಿ ದೂರಿದ್ದಾರೆ.

ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರ ಕಟ್ಟಾ ಬೆಂಬಲಿಗರಾಗಿರುವ ಸೋಲಂಕಿ ಅವರು, ಯಾವುದೇ ಶಾಸಕರ ಹೆಸರನ್ನು ಬಹಿರಂಗಪಡಿಸಿಲ್ಲ. ದೂರವಾಣಿ ಕದ್ದಾಲಿಕೆ ಪ್ರಕರಣ ರಾಜಸ್ಥಾನದ ಅಶೋಕ್‌ ಗೆಹ್ಲೋಟ್‌ ಸರ್ಕಾರಕ್ಕೆ ಹೊಸ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗಿದೆ.

‘ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಆದರೆ, ಕೆಲವು ಶಾಸಕರು ಈ ಬಗ್ಗೆ ಹೇಳಿದ್ದಾರೆ. ದೂರವಾಣಿ ಕರೆಗಳ ಕದ್ದಾಲಿಕೆಯಲ್ಲಿ ರಾಜ್ಯ ಸರ್ಕಾರ ಭಾಗಿಯಾಗಿದೆಯೇ ಎನ್ನುವುದು ಸಹ ನನಗೆ ಗೊತ್ತಿಲ್ಲ. ಶಾಸಕರನ್ನು ಸಿಲುಕಿಸಲು ಕದ್ದಾಲಿಕೆ ನಡೆಸಲಾಗುತ್ತಿದೆ ಎಂದು ಹಲವು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಸೋಲಂಕಿ ತಿಳಿಸಿದ್ದಾರೆ.

ADVERTISEMENT

‘ಕೆಲವು ಶಾಸಕರು ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ, ‘ತನ್ನ ಶಾಸಕರಿಗೆ ಕಾಂಗ್ರೆಸ್‌ ಬೆದರಿಕೆ ಹಾಕುತ್ತಿದೆ. ಶಾಸಕರ ವಿರುದ್ಧವೇ ಬೇಹುಗಾರಿಕೆ ನಡೆಸಲಾಗುತ್ತಿದೆ. ಈ ಶಾಸಕರು ಯಾರು ಎನ್ನುವುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.