ನವದೆಹಲಿ (ಪಿಟಿಐ): ಕೋವಿಡ್ನಿಂದ ಮೃತಪಟ್ಟವರ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸುವುದರ ಮೇಲ್ವಿಚಾರಣೆಗೆ ಮೂರು ಹಂತದಲ್ಲಿ ಸಮಿತಿಯನ್ನು ರಚಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.
ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ಕೋವಿಡ್ ಪೀಡಿತರ ಶವಗಳು ತೇಲಿ ಬರುತ್ತಿರುವುದಕ್ಕೆ ಸಂಬಂಧಿಸಿದ ವರದಿಗಳ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪಂಚಾಯತ್ ಸೇರಿದಂತೆ ಸ್ಥಳೀಯ ಆಡಳಿತಗಳ ಹಂತದಲ್ಲಿ ಸಮಿತಿಗಳು ರಚನೆ ಆಗಬೇಕು ಎಂದು ಅರ್ಜಿದಾರ ವಿನೀತ್ ಜಿಂದಾಲ್ ಕೋರಿದ್ದಾರೆ. ಶವಗಳನ್ನು ನದಿಗೆ ಎಸೆಯುವುದರಿಂದ ನದಿಪಾತ್ರದ ಗ್ರಾಮಗಳು, ನಗರಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದಿದ್ದಾರೆ.
‘ನದಿತಟದಲ್ಲಿ ಕೋವಿಡ್ ಪೀಡಿತರ ಶವಗಳನ್ನು ಹೂಳಲಾಗಿದೆ. ಗಾಳಿಗೆ ಮರಳು ಚದುರಿದ್ದು, ಕೊಳೆತ ಸ್ಥಿತಿಯಲ್ಲಿರುವ ಶವಗಳು ಭೂಮಿ ಮೇಲ್ಮಟ್ಟದಲ್ಲೇ ಕಾಣಿಸುತ್ತಿವೆ’ ಎಂದು ವಕೀಲ ರಾಜ್ಕಿಶೋರ್ ಚೌಧುರಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ, ರಾಷ್ಟ್ರೀಯ ಕ್ಲೀನ್ ಗಂಗಾ ಮಿಷನ್, ಉತ್ತರ ಪ್ರದೇಶ, ಬಿಹಾರ ರಾಜ್ಯ ಸರ್ಕಾರಗಳು ಹಾಗೂ ಈ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.