ತಿರುವನಂತಪುರ: ಕೇರಳದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವುದು ಅನುಚಿತ ಹೇಳಿಕೆ. ಅದು ರಾಜಕೀಯ ಹಿತಾಸಕ್ತಿಯಿಂದ ಕೂಡಿದ್ದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯೊಬ್ಬರು ಎರಡು ರಾಜ್ಯಗಳನ್ನು ಹೋಲಿಕೆ ಮಾಡುವುದು ಸೂಕ್ತವಲ್ಲ. ಅನೇಕ ಕ್ಷೇತ್ರಗಳಲ್ಲಿ ಕೇರಳವು ತುಂಬಾ ಮುಂದಿದೆ. ರಾಜ್ಯವು ಅಪ್ರತಿಮ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದ್ದಾರೆ.
ಚುನಾವಣಾ ಪ್ರಚಾರ ವಿಡಿಯೊ ಸಂದೇಶದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, ನೀವು ಮತದಾನದ ವೇಳೆ ತಪ್ಪು ಮಾಡಿದ್ದೇ ಆದಲ್ಲಿ ರಾಜ್ಯವು ಶೀಘ್ರದಲ್ಲೇ ಕಾಶ್ಮೀರ, ಬಂಗಾಳ ಹಾಗೂ ಕೇರಳದಂತಾಗಲಿದೆ ಎಂದು ಹೇಳಿದ್ದರು.
ಇದಕ್ಕೆ ಈ ಹಿಂದೆಯೇ ತಿರುಗೇಟು ನೀಡಿರುವ ಪಿಣರಾಯಿ ವಿಜಯನ್, ಉತ್ತರದ ರಾಜ್ಯಗಳು ಕೇರಳದಂತೆ ಅಭಿವೃದ್ಧಿ ಹೊಂದಿದರೆ ಜನರು ಶಾಂತಿಯಿಂದ ಮತ್ತು ಉತ್ತಮ ಜೀವನ ನಡೆಸಬಹುದು. ಉತ್ತರ ಪ್ರದೇಶವು ಕೇರಳದಂತೆ ಆದರೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ ದೊರೆಯಲಿದೆ. ಸಾಮಾಜಿಕ ಕಲ್ಯಾಣ, ಜನರ ಜೀವನ ಮಟ್ಟ ಸುಧಾರಣೆಯಾಗಲಿದೆ. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಹತ್ಯೆಗಳು ನಡೆಯದ ಸಾಮರಸ್ಯದ ಸಮಾಜ ನಿರ್ಮಾಣವಾಗಲಿದೆ. ಇಂಥ ಸ್ಥಿತಿ ಉತ್ತರ ಪ್ರದೇಶದ ಜನರಿಗೆ ಬೇಕಾಗಿದೆ. ಇದು ಯೋಗಿ ಆದಿತ್ಯನಾಥ್ ಹೆದರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.