
ಮುಂಬೈ: ಅಪ್ಪಾ, ನಾನು ನಾಳೆ (ಬುಧವಾರ) ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಬಾರಾಮತಿಗೆ ಹೋಗುತ್ತಿದ್ದೇನೆ. ಬಾರಾಮತಿಯಲ್ಲಿ ಅವರು ವಿಮಾನದಿಂದ ಇಳಿದ ನಂತರ, ನಾನು ನಾಂದೇಡ್ಗೆ ಹೋಗುತ್ತೇನೆ, ಹೋಟೆಲ್ ತಲುಪಿದ ತಕ್ಷಣವೇ ನಿಮಗೆ ಫೋನ್ ಮಾಡುತ್ತೇನೆ...’
‘ಮಗಳು ಪಿಂಕಿ ಮಾಲಿ ನನ್ನೊಂದಿಗೆ ಆಡಿದ ಕೊನೆಯ ನುಡಿಗಳಿವು. ನಾಳೆ ಮಾತನಾಡುತ್ತೇನೆ ಎಂದು ಆಕೆ ನೀಡಿದ ಭರವಸೆ ಇನ್ನೆಂದೂ ಈಡೇರುವುದಿಲ್ಲ. ವಿಮಾನ ದುರಂತದಲ್ಲಿ ಅಜಿತ್ ಪವಾರ್ ಅವರೊಂದಿಗೆ ಮಗಳು ಸಹ ಮೃತಪಟ್ಟಿದ್ದಾಳೆ’ ಎಂದು ಪಿಂಕಿಯ ತಂದೆ, ಸೆಂಟ್ರಲ್ ಮುಂಬೈನ ಪ್ರಭಾದೇವಿ ಪ್ರದೇಶದ ನಿವಾಸಿ ಶಿವಕುಮಾರ್ ಮಾಲಿ ಬಿಕ್ಕಳಿಸಿದರು.
ದೆಹಲಿಯ ವಿಎಸ್ಆರ್ ವೆಂಚರ್ಸ್ಗೆ ಸೇರಿದ, ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನದಲ್ಲಿ ಪಿಂಕಿ ಮಾಲಿ ಸಹಾಯಕಿ ಆಗಿದ್ದರು. ಸಿಬ್ಬಂದಿ ಸೇರಿ ಒಟ್ಟು ಐವರು ದುರಂತದಲ್ಲಿ ಮೃತಪಟ್ಟಿದ್ದಾರೆ.
‘ಕೆಲಸ ಮುಗಿದ ನಂತರ ನಾಳೆ ನಿಮ್ಮೊಂದಿಗೆ ಖಂಡಿತ ಮಾತನಾಡುತ್ತೇನೆ ಎಂದು ಮಗಳು ಭರವಸೆ ನಿಡಿದ್ದಳು. ಆದರೆ, ಆ ಕ್ಷಣ ಇನ್ನೆಂದಿಗೂ ಬರುವುದಿಲ್ಲ’ ಎಂದು ಶಿವಕುಮಾರ್ ನೋವಿನಿಂದ ನುಡಿದರು.
ಶಿವಕುಮಾರ್ ಸಹ ಎನ್ಸಿಪಿ– ಎಸ್ಪಿ ಬಣದ ಕಾರ್ಯಕರ್ತರು. ‘ಸ್ಥಳೀಯ ಮುಖಂಡರಾದ ಸಮಾಧಾನ್ ಸಾರ್ವಂಕರ್ ಅವರು, ಅಜಿತ್ ಪವಾರ್ ಅವರ ವಿಮಾನ ಪತನಗೊಂಡಿರುವುದನ್ನು ಫೋನ್ ಮೂಲಕ ನನ್ನ ಗಮನಕ್ಕೆ ತಂದರು’ ಎಂದು ಅವರು ಹೇಳಿದರು.
ಪಿಂಕಿ ಮಾಲಿ ಐದು ವರ್ಷಗಳಿಂದ ಫ್ಲೈಟ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆರಂಭದಲ್ಲಿ ಏರ್ ಇಂಡಿಯಾದಲ್ಲಿದ್ದ ಅವರು ನಂತರ, ಖಾಸಗಿ ವಿಶೇಷ ವಿಮಾನಗಳಲ್ಲಿ ಸಹಾಯಕಿ ಆಗಿ ಸೇರಿದ್ದರು. ಜನವರಿ 16ರಂದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸಲು ಮುಂಬೈಗೆ ಬಂದಿದ್ದಾಗ ಪಿಂಕಿ, ತಂದೆಯನ್ನು ಕೊನೆಯ ಬಾರಿ ಭೇಟಿಯಾಗಿದ್ದರು.
ಪಿಂಕಿ ಮತ್ತು ಪವಾರ್ ಅವರೊಂದಿಗೆ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್, ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್, ಸಹ ಪೈಲಟ್ ಕ್ಯಾಪ್ಟನ್ ಕ್ಯಾಪ್ಟನ್ ಶಾಂಭವಿ ಪಾಠಕ್ ಮೃತಪಟ್ಟಿದ್ದಾರೆ. ಮುಂಬೈನ ಠಾಣೆ ಸಮೀಪದ ವಿಟವಾ ನಿವಾಸಿ ಜಾಧವ್ ಅವರಿಗೆ ತಾಯಿ, ಪತ್ನಿ, ಮತ್ತು ಪುತ್ರ ಇದ್ದಾರೆ.
ಕ್ಯಾಪ್ಟನ್ ಶಾಂಭವಿ ಪಾಠಕ್ ಅವರು, ವಿಎಸ್ಆರ್ ವೆಂಚರ್ಸ್ನಲ್ಲಿ ಮೂರು ವರ್ಷಗಳಿಂದ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯೂಜಿಲೆಂಡ್ನ ಅಂತರರಾಷ್ಟ್ರೀಯ ವಾಣಿಜ್ಯ ಪೈಲಟ್ ಅಕಾಡೆಮಿಯಿಂದ ವಾಣಿಜ್ಯ ಪೈಲಟ್ ತರಬೇತಿ ಪಡೆದುಕೊಂಡಿದ್ದಾರೆ. ಏರೊನಾಟಿಕ್ಸ್, ಏವಿಯೇಷನ್ ಮತ್ತು ಏರೋಸ್ಪೇಸ್ ಸೈನ್ಸ್ನಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ ಎಂಬ ಮಾಹಿತಿ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.