ಮಂದಸೋರ್:ಕಾಂಗ್ರೆಸ್ ಪಕ್ಷದ ತಪ್ಪು ನಿರ್ಧಾರ ಮತ್ತು ತಪ್ಪು ನೀತಿಗಳಿಂದಾಗಿ ಈ ತಲೆಮಾರಿನರೈತರು ಬಳಲಿದ್ದಾರೆ.ಕಾಂಗ್ರೆಸ್ನ ಆ ನಡೆಯಿಂದಾಗಿ ನಮ್ಮ ಸರ್ಕಾರಕ್ಕೂ ಕೆಟ್ಟ ಹೆಸರು ಬಂದಿದೆ. ಇಂದು ಕಾಂಗ್ರೆಸ್ ಪಕ್ಷದ ಅದೇ ನೀತಿ ಅವರಿಗೆ ಉಲ್ಟಾ ಹೊಡೆದಾಗ ಅವರು ಮುಂದೆ ಬಂದು ಕಿರುಚುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ಮಧ್ಯಪ್ರದೇಶದ ಮಂದಸೋರ್ನಲ್ಲಿ ಚುನಾವಣಾಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, ಕಾಂಗ್ರೆಸ್ ಸರ್ಕಾರ ರೈತರನ್ನು ಸಾಲದಲ್ಲಿ ಮುಳುಗಿಸಿತ್ತು. ನಮ್ಮ ಸರ್ಕಾರ ರೈತರನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಸುಳ್ಳನ್ನು ಸೃಷ್ಟಿಸಿ, ಸುಳ್ಳನ್ನೇ ಹಬ್ಬಿಸುತ್ತಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಗರೀಬಿ ಹಟಾವೋ (ಬಡತನ ತೊಲಗಿಸಿ) ಎಂಬ ಘೋಷವಾಕ್ಯ ನೀಡಿದ್ದರು. ಆದರೆ ಬಡತನ ತೊಲಗಿತೇ? ಅವರು ಬ್ಯಾಂಕ್ಗಳನ್ನು ರಾಷ್ಟ್ರೀಕೃತ ಬ್ಯಾಂಕ್ಗಳನ್ನಾಗಿ ಮಾಡಿ ಬಡವರಿಗೆ ಸಹಾಯ ಮಾಡುತ್ತೇನೆ ಎಂದರು.ಆದರೆ ಏನಾಯಿತು? ಹಲವಾರು ಮಂದಿಗೆ ಬ್ಯಾಂಕ್ ಖಾತೆಗಳೇ ಇಲ್ಲ.
ಮೋದಿ ಸರ್ಕಾರವು ಯೂರಿಯಾದ ಕಳ್ಳ ದಂಧೆಗೆ ಕಡಿವಾಣ ಹಾಕಿ, ಯೂರಿಯಾ ಖರೀದಿಸುವ ರೈತರ ಮೇಲೆ ಲಾಠಿ ಪ್ರಹಾರವಾಗುವುದನ್ನು ನಿಲ್ಲಿಸಿತು.ಬಿಜೆಪಿ ರೈತರ ಕಲ್ಯಾಣಕ್ಕಾಗಿ ಬದ್ಧವಾಗಿದೆ.ಕಳೆದ 15 ವರ್ಷಗಳಲ್ಲಿ ಶಿವರಾಜ್ ಚೌಹಾಣ್ ಅವರ ನೇತೃತ್ವದಲ್ಲಿ ಮಧ್ಯಪ್ರದೇಶದ ಕೃಷಿ ವಲಯ ಕ್ಷಿಪ್ರ ಪ್ರಗತಿಯನ್ನು ಸಾಧಿಸಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಮೊದಲ ಪ್ರಧಾನಿ ಆಗಿರುತ್ತಿದ್ದರೆ ದೇಶದ ರೈತರ ಪರಿಸ್ಥಿತಿ ಉತ್ತಮವಾಗಿರುತ್ತಿತ್ತು, ಪಟೇಲ್ ರೈತರ ನಾಯಕರಾಗಿದ್ದರು.ಅವರು ರೈತರ ಕಲ್ಯಾಣಕ್ಕಾಗಿ ದುಡಿದು ರೈತರ ಅಭಿವೃದ್ಧಿ ಮಾಡಿದ್ದರು ಎಂದು ಹೇಳಿದ ಮೋದಿ, ಉತ್ತಮ ಕೆಲಸ ಮುಂದುವರಿಸುವುದಕ್ಕಾಗಿ ಬಿಜೆಪಿಯನ್ನು ಆಶೀರ್ವದಿಸಿ ಎಂದು ಜನರಲ್ಲಿ ವಿನಂತಿಸಿದ್ದಾರೆ. ನಿಮಗೆ ಅವಕಾಶ ಸಿಕ್ಕಿದಾಗ ಏಕತಾ ಪ್ರತಿಮೆಯನ್ನು ನೋಡಲು ಬನ್ನಿ ಎಂದು ಮಂದಸೋರ್ನ ಜನರನ್ನು ಮೋದಿ ಗುಜರಾತ್ಗೆ ಆಮಂತ್ರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.