Shehzad Poonawalla
ನವದೆಹಲಿ: ‘ರಾಜಕಾರಣದಲ್ಲಿ ನೈತಿಕತೆಯನ್ನು ತರುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಭ್ರಷ್ಟಾಚಾರಿಗಳ ಕೂಟವು’ ವಿರೋಧಿಸುತ್ತಿದೆ ಎಂದು ಬಿಜೆಪಿ ಸೋಮವಾರ ವಾಗ್ದಾಳಿ ನಡೆಸಿದೆ.
ಗಂಭೀರ ಆರೋಪದ ಮೇಲೆ ಸತತ 30 ದಿನ ಬಂಧನದಲ್ಲಿರುವ ಪ್ರಧಾನಿ, ಮುಖ್ಯಮಂತ್ರಿ ಹಾಗೂ ಸಚಿವರನ್ನು ಪದಚ್ಯುತಿಗೊಳಿಸುವ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದೆ.
‘ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೈತಿಕತೆ, ಪಾರದರ್ಶಕ ರಾಜಕಾರಣ ಹಾಗೂ ಉತ್ತಮ ಆಡಳಿತಕ್ಕಾಗಿ ಮೂರು ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿದ್ದು, ಇವು ರಾಜಕೀಯ ಅಪರಾಧ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಮುಖ ಅಸ್ತ್ರಗಳಾಗಲಿವೆ’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕೇಂದ್ರದ ಈ ಮಸೂದೆಗಳನ್ನು ಇಡೀ ದೇಶವೇ ಸ್ವಾಗತಿಸಿದೆ. ಆದರೆ, ಭ್ರಷ್ಟಾಚಾರಿಗಳ ಕೂಟವು ಮಾತ್ರ ಸ್ವಜನಪಕ್ಷಪಾತಕ್ಕಾಗಿ, ತಮ್ಮ ಕುಟುಂಬದ ಹಿತಕ್ಕಾಗಿ ರಾಜಕೀಯದ ಆದರ್ಶ ತತ್ವಗಳನ್ನು ಗಾಳಿಗೆ ತೂರಿ ಟೀಕಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಸೂದೆಗಳ ವಿರುದ್ಧ ವಿರೋಧ ಪಕ್ಷಗಳು ಹೊಂದಿರುವ ನಿಲುವನ್ನು ಟೀಕಿಸಿದ ಪೂನವಾಲಾ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೆಸರಿನಲ್ಲಿ ‘ಭ್ರಷ್ಟಾಚಾರ’ವನ್ನು ರಕ್ಷಿಸಿ, ಪೋಷಿಸಲು ಒಟ್ಟಾಗಿದ್ದಾರೆ ಎಂದು ದೂರಿದರು.
‘ನೀವು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿಲ್ಲ. ನಿಮ್ಮ ಕುಟುಂಬವು ಮಾಡಿರುವ ಭ್ರಷ್ಟಾಚಾರವನ್ನು ರಕ್ಷಿಸಿಕೊಳ್ಳುತ್ತಿದ್ದೀರಿ’ ಎಂದು ಅವರು ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.