ನವದೆಹಲಿ (ಪಿಟಿಐ): ಸಮಾಜಕ್ಕೆ ಅಂಟಿರುವ ‘ಜಾತೀಯತೆ’ ಮತ್ತು ‘ಪ್ರಾದೇಶಿಕತೆ’ಯನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದರು.
ದಸರಾ ಹಬ್ಬವು ದೇಶದ ದುಷ್ಟಶಕ್ತಿಗಳ ವಿರುದ್ಧ ದೇಶಭಕ್ತಿಗೆ ಸಿಗುವ ವಿಜಯದ ಸಂಕೇತವಾಗಬೇಕು ಎಂದು ಹೇಳಿದರು.
ದಸರಾ ಕಾರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಶತಮಾನಗಳ ಕಾಯುವಿಕೆ ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದೇವೆ. ಇದು ನಮ್ಮೆಲ್ಲರ ಅದೃಷ್ಟ. ಮಂದಿರ ನಿರ್ಮಾಣ ಕಾಮಗಾರಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.
‘ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆ ಯಶಸ್ವಿಯಾಗಿದೆ, ಹೊಸ ಸಂಸತ್ ಭವನ ಉದ್ಘಾಟನೆಯಾಗಿದೆ ಮತ್ತು ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತಿನ ಎರಡೂ ಸದನದಲ್ಲಿ ಅಂಗೀಕಾರವಾಗಿ, ರಾಷ್ಟ್ರಪತಿಯೂ ಅಂಕಿತ ಹಾಕಿದ್ದಾರೆ. ಈ ಸುಸಂದರ್ಭದಲ್ಲಿ ಮಂದಿರ ನಿರ್ಮಾಣವಾಗುತ್ತಿದೆ’ ಎಂದು ತಿಳಿಸಿದರು.
ಒಂದು ಕುಟುಂಬದ ಸಾಮಾಜಿಕ–ಆರ್ಥಿಕ ಸ್ಥಾನಮಾನ ಹೆಚ್ಚಿಸುವುದೂ ಸೇರಿದಂತೆ ಇಂಥ 10 ಸತ್ಕಾರ್ಯಗಳನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿ. ಪ್ರತಿಯೊಬ್ಬರೂ ಅಭಿವೃದ್ಧಿಯಾದರೆ ದೇಶವೂ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.