ರೇವಂತ್ ರೆಡ್ಡಿ
(ಪಿಟಿಐ ಚಿತ್ರ)
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮತಃ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ. ವಾಸ್ತವವಾಗಿ ಮೋದಿ ಅವರು ಹಿಂದುಳಿದ ವರ್ಗಗಳ ವಿರೋಧಿಯಾಗಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಮೋದಿ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅವರು ಮೂಲತಃ ಹಿಂದುಳಿದ ವರ್ಗವದಲ್ಲ. ಕಾನೂನಿನ ಮೂಲಕ ಹಿಂದುಳಿದ ವರ್ಗಕ್ಕೆ ಸೇರಿದವರು' ಎಂದು ತಿಳಿಸಿದ್ದಾರೆ.
'ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾನೂನು ರೂಪಿಸಿ, ತಮ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದರು. ಮೋದಿ ಅವರ ಪ್ರಮಾಣ ಪತ್ರಗಳು ಹಿಂದುಳಿದ ವರ್ಗದಲ್ಲಿಯೇ ಇದೆ. ಆದರೆ ಅವರ ಮನಸ್ಥಿತಿ ಹಿಂದು ವರ್ಗಗಳ ವಿರೋಧಿಯಾಗಿದೆ 'ಎಂದು ಕಿಡಿಕಾರಿದ್ದಾರೆ.
'ಮೋದಿ ಅವರು ಹಿಂದುಳಿದ ವರ್ಗಕ್ಕೆ ಸೇರಿದ್ದವರಾಗಿದ್ದರೆ, ಏಕೆ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಇದೂವರೆಗೂ ನಡೆಸಿಲ್ಲ. ಹಿಂದುಳಿದ ವರ್ಗಗಳ ಜನಸಂಖ್ಯೆ ನಿರ್ಧಾರವಾಗಿಲ್ಲ. ಕಾಂಗ್ರೆಸ್ ಜನಗಣತಿಗಾಗಿ ಧ್ವನಿ ಎತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ಹೇರಲಿದ್ದಾರೆ' ಎಂದು ರೆಡ್ಡಿ ತಿಳಿಸಿದ್ದಾರೆ.
'ಜಾತಿ ಸಮೀಕ್ಷೆಯನ್ನು ಸಾಮಾನ್ಯ ಜನಗಣತಿಯ ಭಾಗವಾಗಿ ಮಾಡಬೇಕು. ಇದರಿಂದ ಹಿಂದುಳಿದ ವರ್ಗಗಳ ಸಂಖ್ಯೆ ನಿರ್ದಿಷ್ಟವಾಗಿರಲಿದ್ದು, ಸರ್ಕಾರದ ಯೋಜನೆಗಳಿಂದ ವಂಚಿತರಾದರಿಗೆ ಅನುಕೂಲವಾಗಲಿದೆ. ಕೇಂದ್ರದ ಎನ್ಡಿಎ ಸರ್ಕಾರ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣ ಮಂಜೂರು ಮಾಡದೆ, ಬಿಹಾರ ಮತ್ತು ಗುಜರಾತ್ನಂತಹ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ' ನೀಡಿದೆ.
'ನಾವು ಕೇಂದ್ರಕ್ಕೆ ಒಂದು ರೂಪಾಯಿ ತೆರಿಗೆ ಪಾವತಿಸಿದರೆ, ನಮಗೆ 42 ಪೈಸೆ ಸಿಗುತ್ತದೆ. ಒಂದು ರೂಪಾಯಿ ಪಾವತಿಸಿದರೆ, ಬಿಹಾರ ಏಳು ರೂಪಾಯಿ ಪಡೆಯುತ್ತದೆ, ಉತ್ತರ ಪ್ರದೇಶ ಮೂರು ರೂಪಾಯಿ ಪಡೆಯುತ್ತದೆ. ತೆಲಂಗಾಣ ಏನು ಪಾಪ ಮಾಡಿದೆ? ಮೋದಿ ಅವರೇ ನೀವು ನಮ್ಮ ನಿಧಿಯಿಂದ 58 ಪೈಸೆ ತೆಗೆದುಕೊಳ್ಳುತ್ತಿದ್ದೀರಿ'ಎಂದು ಟೀಕಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.