ADVERTISEMENT

ಸಂಪುಟದಲ್ಲಿ ಜವಾಬ್ದಾರಿ ಬೇಡ ಎಂದ ಅರುಣ್ ಜೇಟ್ಲಿ ಮನವೊಲಿಕೆಗೆ ಮೋದಿ ಯತ್ನ

ಅನಾರೋಗ್ಯದಿಂದಾಗಿ ಹುದ್ದೆ ಬೇಡೆ ಎಂದಿದ್ದ ಜೇಟ್ಲಿ

ಪಿಟಿಐ
Published 30 ಮೇ 2019, 1:40 IST
Last Updated 30 ಮೇ 2019, 1:40 IST
   

ನವದೆಹಲಿ: ಹೊಸದಾಗಿ ರಚನೆಯಾಗಲಿರುವ ಸಚಿವ ಸಂಪುಟಕ್ಕೆ ತನ್ನನ್ನು ಸೇರಿಸಿಕೊಳ್ಳಬೇಡಿ ಎಂದು ಮನವಿ ಸಲ್ಲಿಸಿದ್ದ ಬಿಜೆಪಿಯ ಹಿರಿಯ ನಾಯಕ ಅರುಣ್‌ ಜೇಟ್ಲಿ ಮನವೊಲಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ.

ಬುಧವಾರ ಸಂಜೆ ಜೇಟ್ಲಿ ಅವರ ಅಧಿಕೃತ ನಿವಾಸಕ್ಕೆ ತೆರಳಿದ ಮೋದಿ, ಸುಮಾರು ಅರ್ಧಗಂಟೆ ಕಾಲ ಮಾತುಕತೆ ನಡೆಸಿ, ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಜೇಟ್ಲಿ ಅವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಮೋದಿಗೆ ಬುಧವಾರ ಪತ್ರ ಬರೆದಿದ್ದ ಜೇಟ್ಲಿ, ‘ನಾನು ಹಲವು ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ. ಇದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗಬಹುದು. ಆದ್ದರಿಂದ ಹೊಸ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ನನ್ನಿಂದ ಸಾಧ್ಯವಾಗಲಾರದು. ಆದರೆ ಸರ್ಕಾರ ಅಥವಾ ಪಕ್ಷಕ್ಕೆ ಅಗತ್ಯವೆನಿಸಿದರೆ ಅನೌಪಚಾರಿಕವಾಗಿ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ’ ಎಂದಿದ್ದರು. ಈ ಪತ್ರದ ಪ್ರತಿಯನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದ ಜೇಟ್ಲಿ ಅನಾರೋಗ್ಯದಿಂದಾಗಿ ಕೊನೆಯ ಬಜೆಟ್‌ ಮಂಡಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.