ADVERTISEMENT

ದೇಶದಲ್ಲಿ ಬಿರು ಬಿಸಿಲು: ಸಜ್ಜಾಗಿರಲು ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ದೇಶದಲ್ಲಿ ವಾಡಿಕೆಗಿಂತ ಮೊದಲೇ ತಾಪಮಾನ ಏರಿಕೆಯಾಗಿರುವುದು ಹಾಗೂ ಎಲ್‌ನಿನೊ (ಪೆಸಿಫಿಕ್‌ ಸಾಗರದ ಮೇಲ್ಮೈಯಲ್ಲಿನ ತಾಪಮಾನದಲ್ಲಿ ಆಗುವ ಬದಲಾವಣೆ) ಪರಿಣಾಮ ಮುಂಗಾರು ದುರ್ಬಲಗೊಂಡಿರುವುದರಿಂದ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಈ ಪರಿಸ್ಥಿತಿಯನ್ನು ಎದುರಿಸಲು ದೇಶವು ಯಾವ ರೀತಿಯಲ್ಲಿ ಸನ್ನದ್ಧವಾಗಿದೆ ಎಂಬುದರ ಕುರಿತ ಮಾಹಿತಿಯನ್ನು ಅವರು ಪಡೆದುಕೊಂಡರು.

‘ವಿ‍‍‍ಪರೀತ ಬಿಸಿಲಿನ ಪರಿಸ್ಥಿತಿಯಲ್ಲಿ ಆಹಾರ ಧಾನ್ಯಗಳನ್ನು ಶೇಖರಿಸಿಡಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಪ್ರಧಾನಿ ಮೋದಿ ಸೂಚಿಸಿದ್ದಾರೆ. ಪ್ರತಿದಿನದ ಹವಾಮಾನ ವರದಿಯನ್ನು ಕಡ್ಡಾಯವಾಗಿ ಸಿದ್ಧಪಡಿಸುವಂತೆ ಭಾರತೀಯ ಹವಾಮಾನ ಇಲಾಖೆಗೆ (ಐಎಂಡಿ) ತಾಕೀತು ಮಾಡಿದ್ದಾರೆ’ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ADVERTISEMENT

‘ನಾಗರಿಕರು, ವೈದ್ಯಕೀಯ ಕ್ಷೇತ್ರದ ವೃತ್ತಿಪರರು, ನಗರಸಭೆ ಹಾಗೂ ಪಂಚಾಯಿತಿಯ ಆಡಳಿತ, ವಿಪತ್ತು ನಿರ್ವಹಣಾ ತಂಡ, ಮುಖ್ಯವಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಾಗಿ ಪ್ರತ್ಯೇಕ ಜಾಗೃತಿ ಪರಿಕರಗಳನ್ನು ಸಿದ್ಧಪಡಿಸಬೇಕು. ಟಿ.ವಿ ಹಾಗೂ ಎಫ್‌ಎಂ ರೇಡಿಯೊಗಳು ದಿನದ ಹವಾಮಾನದ ಕುರಿತ ಮಾಹಿತಿ ಒದಗಿಸುವುದಕ್ಕಾಗಿಯೇ ಕೆಲ ನಿಮಿಷ ಮೀಸಲಿಡಬೇಕು. ತಾಪಮಾನದಿಂದಾಗಿ ಆಗುವ ಅವಘಡಗಳನ್ನು ಎದುರಿಸಲು ಎಲ್ಲಾ ಆಸ್ಪತ್ರೆಗಳು ಸನ್ನದ್ಧವಾಗಿವೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ’ ಎಂದು ಹೇಳಿದೆ.

ತಾಪಮಾನದಿಂದಾಗಿ ಹಿಂಗಾರು ಬೆಳೆಗಳ ಮೇಲೆ ಉಂಟಾಗುವ ಪರಿಣಾಮ, ಪ್ರಮುಖ ಬೆಳೆಗಳ ನಿರೀಕ್ಷಿತ ಇಳುವರಿ ಕುರಿತು ಅಧಿಕಾರಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.