ADVERTISEMENT

ಕೊಳಕು ರಾಜಕೀಯಕ್ಕೆ ಅಖಾಡವಾಗಿ ಬಳಕೆ: ಕಾಂಗ್ರೆಸ್‌ ನಡೆಗೆ ಪ್ರಧಾನಿ ಮೋದಿ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 14:33 IST
Last Updated 22 ಫೆಬ್ರುವರಿ 2026, 14:33 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಮೀರಠ್ (ಉತ್ತರ ಪ್ರದೇಶ)(ಪಿಟಿಐ): ಕಾಂಗ್ರೆಸ್‌ ಪಕ್ಷವು ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ‘ಕೊಳಕು ಮತ್ತು ನಾಚಿಕೆಗೇಡಿನ’ ರಾಜಕೀಯ ಅಖಾಡವಾಗಿ ಬಳಸಿಕೊಂಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ನಡೆದ ಜಾಗತಿಕ ಕೃತಕ ಬುದ್ಧಿಮತ್ತೆ ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರು ಶರ್ಟ್‌ ತೆಗೆದಿಟ್ಟು ಪ್ರತಿಭಟನೆ ನಡೆಸಿದ್ದನ್ನು ಅವರು ಖಂಡಿಸಿದರು. 

ನಮೋ ಭಾರತ್‌ ರೈಲು ಮತ್ತು ಮೀರಠ್ ಮೆಟ್ರೊ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ADVERTISEMENT

‘ಕಾಂಗ್ರೆಸ್‌ ನಡೆಯು ಎಷ್ಟರಮಟ್ಟಿಗೆ ಸೈದ್ಧಾಂತಿಕ ದಿವಾಳಿತನದ್ದು ಮತ್ತು ದರಿದ್ರವಾದುದು ಎಂಬುದರ ಸೂಚಕ ಇದು’ ಎಂದು ಟೀಕಿಸಿದರು.

‘ಕಾಂಗ್ರೆಸ್‌ ಪಕ್ಷವು ಎಲ್ಲಾ ‘ಮಿತಿಗಳನ್ನು ಮೀರಿದೆ’. ಪಕ್ಷದ ನಡೆಗೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಘಟನೆಯನ್ನು ಟೀಕಿಸಿ ಸತ್ಯ ಮತ್ತು ದೇಶದ ಪರವಾಗಿ ನಿಂತಿದ್ದಕ್ಕೆ ಹಲವು ವಿರೋಧ ಪಕ್ಷಗಳಿಗೆ ಧನ್ಯವಾದ’ ಎಂದು ಹೇಳಿದರು.

‘ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಜನರು ಹಗಲು–ರಾತ್ರಿ ದುಡಿಯುತ್ತಿದ್ದಾರೆ. ಕೆಲವು ಪಕ್ಷಗಳಿಗೆ ದೇಶದ ಯಶಸ್ಸನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ದೂರಿದರು.

‘80 ದೇಶಗಳ ಪ್ರತಿನಿಧಿಗಳು ಮತ್ತು 20 ದೇಶಗಳ ಮುಖಂಡರು ಎ.ಐ ಶೃಂಗದಲ್ಲಿ ಭಾಗಿಯಾಗಿದ್ದರು. ಅದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಆದರೆ ಕಾಂಗ್ರೆಸ್ ಮಾಡಿದ್ದೇನು? ಪಕ್ಷದ ನಾಯಕರು ಜಾಗತಿಕ ಸಮಾವೇಶವನ್ನು ತಮ್ಮ ಕೊಳಕು ರಾಜಕೀಯಕ್ಕೆ ಬಳಸಿಕೊಂಡರು. ವಿದೇಶಿ ಅತಿಥಿಗಳ ಎದುರು ಶರ್ಟ್‌ ತೆಗೆದಿಟ್ಟು ಬಂದರು. ನೀವು ‘ನಗ್ನ’ರಾಗಿದ್ದೀರಿ ಎನ್ನುವುದು ಈಗಾಗಲೇ ದೇಶಕ್ಕೆ ತಿಳಿದಿದೆ. ಮತ್ತೆ ಏಕೆ ಇನ್ನಷ್ಟು ಬೆತ್ತಲೆಯಾಗುವಿರಿ’ ಎಂದು ವ್ಯಂಗ್ಯವಾಡಿದರು.

‘ಪಕ್ಷದ ನಾಯಕರು ಮೋದಿಯನ್ನು ದ್ವೇಷಿಸುತ್ತಾರೆ. ಅವರು ನನ್ನ ಸಾವು ಬಯಸುತ್ತಾರೆ. ನನ್ನ ತಾಯಿಯನ್ನು ನಿಂದನೆ ಮಾಡಲೂ ಅವರು ಹಿಂಜರಿಯುವುದಿಲ್ಲ. ಅವರು ಬಿಜೆಪಿ ಮತ್ತು ಎನ್‌ಡಿಎಯನ್ನು ವಿರೋಧಿಸುತ್ತಾರೆ. ಅದು ಅವರ ರಾಜಕೀಯಕ್ಕೆ ಅಗತ್ಯವೂ ಇರಬಹುದು. ನಾವದನ್ನು ಸಹಿಸುತ್ತೇವೆ. ಆದರೆ ಎ.ಐ ಶೃಂಗವು ಬಿಜೆಪಿ ಕಾರ್ಯಕ್ರಮವಲ್ಲ; ಅದು ದೇಶದ ಕಾರ್ಯಕ್ರಮ ಎಂಬುದನ್ನು ಕಾಂಗ್ರೆಸ್‌ ನೆನಪಿಟ್ಟುಕೊಳ್ಳಬೇಕು’ ಎಂದು ಹೇಳಿದರು.

‘ಪ್ರಧಾನಿ ಕುರ್ಚಿಯಲ್ಲಿ ಕೂರಬೇಕೆಂದರೆ ಮೊದಲು ಜನರ ಮನಸ್ಸನ್ನು ಗೆಲ್ಲಬೇಕು’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಶತಾಬ್ದಿ ನಗರ ನಿಲ್ದಾಣದಿಂದ ಮೀರತ್‌ ದಕ್ಷಿಣ ನಿಲ್ದಾಣದವರೆಗೆ ಮೆಟ್ರೊದಲ್ಲಿ ಪ್ರಯಾಣಿಸಿದರು –ಪಿಟಿಐ ಚಿತ್ರ

ಮೀರಠ್ ಮೆಟ್ರೊ ‘ನಮೋ ಭಾರತ್‌’ ರೈಲಿಗೆ ಹಸಿರು ನಿಶಾನೆ...

ಪ್ರಧಾನಿ ನರೇಂದ್ರ ಮೋದಿ ಅವರು ಮೀರಠ್ ಮೆಟ್ರೊ ಮತ್ತು ‘ನಮೋ ಭಾರತ್‌’ ರೈಲಿಗೆ ಭಾನುವಾರ ಹಸಿರು ನಿಶಾನೆ ತೋರಿದರು.

ಶತಾಬ್ದಿ ನಗರ ನಿಲ್ದಾಣದಿಂದ ಮೀರಠ್ ದಕ್ಷಿಣ ನಿಲ್ದಾಣದವರೆಗೆ ಅವರು ಮೆಟ್ರೊದಲ್ಲಿ ಪ್ರಯಾಣಿಸಿದರು. ಇದೇ ಸಂದರ್ಭದಲ್ಲಿ ಸುಮಾರು ₹12930 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಿದರು. 82 ಕಿ.ಮೀ. ಉದ್ದದ ದೆಹಲಿ–ಮೀರಠ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತದ ಮೊದಲ ನಮೋ ಭಾರತ್ ರೀಜನಲ್ ರ‍್ಯಾಪಿಡ್‌ ಟ್ರಾನ್ಸಿಟ್ ಸಿಸ್ಟಂ (ಆರ್‌ಆರ್‌ಟಿಎಸ್) ಅನ್ನು ಉದ್ಘಾಟಿಸಿದರು.

ಗಂಟೆಗೆ 180 ಕಿ.ಮೀ. ವೇಗದಲ್ಲಿ ಸಾಗುವ ‘ನಮೋ ಭಾರತ್’ ರೈಲು ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಸಾಹಿಬಾಬಾದ್ ಗಾಜಿಯಾಬಾದ್ ಮೋದಿನಗರ ಮತ್ತು ಮೀರಠ್‌ನಂತಹ ಪ್ರಮುಖ ನಗರಗಳನ್ನು ದೆಹಲಿಯೊಂದಿಗೆ  ಸಂಪರ್ಕಿಸುತ್ತದೆ. ಮೀರಠ್ ಮೆಟ್ರೊ ದೇಶದ ಅತ್ಯಂತ ವೇಗದ ಮೆಟ್ರೊ ವ್ಯವಸ್ಥೆಯಾಗಿದೆ.

ಇದರ ಕಾರ್ಯಾಚರಣೆಯ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ. ಆಗಿದೆ. ಇದು ನಿಗದಿತ ಸ್ಥಳಗಳಲ್ಲಿ ನಿಲುಗಡೆಯಾಗಿಯೂ 30 ನಿಮಿಷಗಳಲ್ಲಿ ಗಮ್ಯಸ್ಥಾನವನ್ನು ತಲುಪಲಿದೆ. ಇದು ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಮತ್ತು ವಾಹನಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣವನ್ನು ತಗ್ಗಿಸಲಿದೆ.

ಮೀರತ್‌ ಮೆಟ್ರೊ ಸೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.