ಖೇಡಾ, ಗುಜರಾತ್ : ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳ ಕುರಿತು ಮೌನವಹಿಸುವ ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳಿಂದ ಗುಜರಾತ್ ಮತ್ತು ದೇಶವನ್ನು ರಕ್ಷಿಸುವುದು ಬಹಳ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಹೇಳಿದರು.
ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಸಮಾನ ಮನಸ್ಕ ಪಕ್ಷಗಳು ಭಯೋತ್ಪಾದನೆಯನ್ನು ಯಶಸ್ಸಿಗೆ ಅಡ್ಡದಾರಿ ಎಂದು ಭಾವಿಸುತ್ತವೆ. ಸಣ್ಣ ಪಕ್ಷಗಳ ಅಧಿಕಾರ ದಾಹ ಇನ್ನೂ ತೀವ್ರವಾಗಿರುತ್ತದೆ. ದೊಡ್ಡಮಟ್ಟದ ಭಯೋತ್ಪಾದಕ ಕೃತ್ಯಗಳು ನಡೆದಾಗ ಈ ಪಕ್ಷಗಳು ಬಾಯಿ ಬಿಡುವುದೇ ಇಲ್ಲ ಎಂದರು. 26/11 ಮುಂಬೈ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.
‘ಭಯೋತ್ಪಾದನೆ ಇನ್ನೂ ಅಂತ್ಯಕಂಡಿಲ್ಲ. ಅದರಂತೆ ಕಾಂಗ್ರೆಸ್ ರಾಜಕೀಯವೂ ಬದಲಾಗಿಲ್ಲ. ಓಲೈಕೆ ರಾಜಕಾರಣ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಭಯೋತ್ಪಾದನೆ ಇರುತ್ತದೆ. ಭಯೋತ್ಪಾದಕರನ್ನುರಕ್ಷಿಸಲು ನ್ಯಾಯಾಲಯದ ಮೆಟ್ಟಿಲನ್ನೂ ಅವರು ಏರುತ್ತಾರೆ. ಬಾಟ್ಲಾ ಹೌಸ್ ಎನ್ಕೌಂಟರ್ ನಡೆದ ವೇಳೆ ಕಾಂಗ್ರೆಸ್ ನಾಯಕರು ಉಗ್ರನಿಗಾಗಿ ಕಣ್ಣೀರು ಸುರಿಸಿದ್ದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.