ADVERTISEMENT

'ಆರೋಗ್ಯ ವನ' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಗುಜರಾತ್‌ನ ಪ್ರಸಿದ್ಧ ಪ್ರವಾಸಿ ತಾಣ ‘ಏಕತಾ ಪ್ರತಿಮೆ’ ಬಳಿ ನಿರ್ಮಾಣ

ಪಿಟಿಐ
Published 30 ಅಕ್ಟೋಬರ್ 2020, 9:36 IST
Last Updated 30 ಅಕ್ಟೋಬರ್ 2020, 9:36 IST
ಕೆವಾಡಿಯಾ ಗ್ರಾಮದ ಸರ್ದಾರ್ ‘ಏಕತಾ ಪ್ರತಿಮೆ‘ ಬಳಿ ನಿರ್ಮಾಣವಾಗಿರುವ ‘ಆರೋಗ್ಯ ವನ‘ದ ‘ಡಿಜಿಟಲ್ ಮಾಹಿತಿ‘ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಚಿತ್ರಗಳು : ಪ್ರಧಾನಿ ಕಚೇರಿಯ ಟ್ವಿಟ್ಟರ್‌ ಖಾತೆ
ಕೆವಾಡಿಯಾ ಗ್ರಾಮದ ಸರ್ದಾರ್ ‘ಏಕತಾ ಪ್ರತಿಮೆ‘ ಬಳಿ ನಿರ್ಮಾಣವಾಗಿರುವ ‘ಆರೋಗ್ಯ ವನ‘ದ ‘ಡಿಜಿಟಲ್ ಮಾಹಿತಿ‘ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಚಿತ್ರಗಳು : ಪ್ರಧಾನಿ ಕಚೇರಿಯ ಟ್ವಿಟ್ಟರ್‌ ಖಾತೆ   

ಕೆವಾಡಿಯಾ (ಗುಜರಾತ್‌): ಇಲ್ಲಿನ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ‘ಯ ಸಮೀಪದಲ್ಲಿ ನಿರ್ಮಿಸಲಾಗಿರುವ ಔಷಧೀಯ ಸಸ್ಯಗಳು, ಗಿಡಮೂಲಿಕೆಗಳ ಉದ್ಯಾನ ‘ಆರೋಗ್ಯ ವನ‘ವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದರು.

17 ಎಕರೆ ಪ್ರದೇಶದಲ್ಲಿರುವ ಈ ‘ಆರೋಗ್ಯ ವನ‘ದಲ್ಲಿ ವೈವಿಧ್ಯಮಯ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ. ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವ ಔಷಧೀಯ ಸಸ್ಯಗಳು ಈ ವನದಲ್ಲಿವೆ. ಜನರ ಜೀವನದಲ್ಲಿ ಯೋಗ, ಆಯುರ್ವೇದ ಮತ್ತು ಧ್ಯಾನದ ಮಹತ್ವವನ್ನು‘ಆರೋಗ್ಯ ವನ‘ ಒತ್ತಿಹೇಳುತ್ತದೆ.

ಈ ವಿಸ್ತಾರವಾದ ಉದ್ಯಾನದಲ್ಲಿ 380 ಆಯ್ದ ಜಾತಿಗಳ ಐದು ಲಕ್ಷ ಔಷಧೀಯ ಸಸ್ಯಗಳನ್ನು ಬೆಳೆಸಲಾಗಿದೆ. ಜತೆಗೆ, ಕಮಲದ ಕೊಳ, ಆಲ್ಬಾ ಗಾರ್ಡನ್, ಪರಿಮಳ ಪಸರಿಸುವ ಸಸ್ಯಗಳ ಉದ್ಯಾನ, ಯೋಗ ಮತ್ತು ಧ್ಯಾನ ಕೇಂದ್ರ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ ಕೇಂದ್ರ, ನೆನಪಿನ ಕಾಣಿಕೆಗಳು ಮತ್ತು ಕರಕುಶಲ ವಸ್ತುಗಳ ಮಾರಾಟದ ಮಳಿಗೆ ಮತ್ತು ಕೆಫೆಟೇರಿಯಾ ಕೂಡ ಇದೆ.

ADVERTISEMENT

‘ಆರೋಗ್ಯ ವನ‘ವನ್ನು ಉದ್ಘಾಟಿಸಿದ ಪ್ರಧಾನಿಯವರು, ಡಿಜಿಟಲ್ ಮಾಹಿತಿ ಕೇಂದ್ರ ಮತ್ತು ಒಳಾಂಗಣ ಸಸ್ಯ ಉದ್ಯಾನಕ್ಕೆ ಭೇಟಿ ನೀಡಿದರು. ನಂತರ ಗಾಲ್ಫ್‌ ಕಾರ್ಟ್‌ನಲ್ಲಿ ಸುತ್ತಾಡಿದರು. ಪ್ರವಾಸಿ ತಾಣವನ್ನು ಪರಿಚಯಿಸುವ ಮಾರ್ಗದರ್ಶಿ (ಗೈಡ್‌)ಗಳೊಂದಿಗೆ ಅವರು ಮಾತನಾಡಿದರು.

ಎರಡು ದಿನಗಳ ಭೇಟಿಗಾಗಿ ಗುಜರಾತ್‌ಗೆ ಆಗಮಿಸಿರುವ ಪ್ರಧಾನಿಯವರು, ಸುಮಾರು 17 ನೂತನ ಯೋಜನೆ ಗಳನ್ನು ಉದ್ಘಾಟಿಸಲಿದ್ದಾರೆ. ಅದರಲ್ಲಿ ಈ 'ಆರೋಗ್ಯ ವನ' ಕೂಡ ಪ್ರಮುಖವಾದ ಯೋಜನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.