ನವದೆಹಲಿ: ಜಾಗತಿಕ ಸೋಂಕು ಕೋವಿಡ್–19ಗೆ ಔಷಧ ಕಂಡುಹಿಡಿಯುವವರೆಗೂ ನಾವೆಲ್ಲರು ಮಾಸ್ಕ್ ಧರಿಸಬೇಕು ಮತ್ತು ಪರಸ್ಪರ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
‘ಆತ್ಮ ನಿರ್ಭರ್ ಉತ್ತರಪ್ರದೇಶ ರೋಜ್ಗಾರ್ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ‘ನಾವೆಲ್ಲರೂ ಏರು–ಪೇರುಗಳನ್ನು ಕಂಡಿದ್ದೇವೆ. ನಮ್ಮ ಸಾಮಾಜಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಒಂದೇ ಸಮಯದಲ್ಲಿ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ಯಾರೊಬ್ಬರೂ ಎಣಿಸಿರಲಿಲ್ಲ. ಪ್ರತಿಯೊಬ್ಬರ ಮೇಲೂ ಇದು ಪರಿಣಾಮ ಬೀರಿದೆ ಮತ್ತು ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯಾವಾಗ ನಾವೆಲ್ಲರೂ ಈ ಸಾಂಕ್ರಾಮಿಕ ಕಾಯಿಲೆಯಿಂದ ನಿರಾಳರಾಗುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲಿಯವರೆಗೆ ಔಷಧ ಅಭಿವೃದ್ಧಿಪಡಿಸಲಾಗುವುದಿಲ್ಲವೇ ಅಲ್ಲಿಯವರೆಗೆ ಎರಡು ಮೀಟರ್ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್ ಧರಿಸಬೇಕು ಎಂಬುದು ನಮಗೆಲ್ಲ ಗೊತ್ತಿದೆ’ ಎಂದು ಹೇಳಿದ್ದಾರೆ.
‘ಕೆಲಸದ ಶಕ್ತಿ ಎಂತಹದ್ದು ಎಂಬುದನ್ನು ನಾನು ನಿಮ್ಮೊಂದಿಗೆ ಅನುಭವಿಸುತ್ತಿದ್ದೇನೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ರೋಜ್ಗಾರ್ ಅಭಿಯಾನವು ಕೆಲಸದ ಶಕ್ತಿಯನ್ನು ಅವಲಂಭಿಸಿದೆ. ಈ ಶಕ್ತಿಯು ಆತ್ಮ ನಿರ್ಭರ್ ಉತ್ತರ ಪ್ರದೇಶ ರೋಜ್ಗಾರ್ ಅಭಿಯಾನಕ್ಕೆ ಸ್ಫೂರ್ತಿ ನೀಡಿದೆ’ ಎಂದಿದ್ದಾರೆ.
‘ಉತ್ತರ ಪ್ರದೇಶದಂತೆಯೇ ಎಲ್ಲ ರಾಜ್ಯಗಳೂ ಈ ರೀತಿಯ ಯೋಜನೆಗಳನ್ನು ರೂಪಿಸಲಿವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ’ ಎಂದೂ ಹೇಳಿದ್ದಾರೆ.
ಮುಂದುವರಿದು,‘ಕರೋನಾವೈರಸ್ ಸಂಕಷ್ಟದ ಸಂದರ್ಭದಲ್ಲಿ ಉತ್ತರ ಪ್ರದೇಶವವು ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ತೋರಿದೆ. ಕೊರೊನಾವೈರಸ್ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ ರೀತಿ ಅದ್ಭುತವಾಗಿದೆ’ ಎಂದು ಶ್ಲಾಘಿಸಿದ್ದಾರೆ.
ಸುಮಾರು 1.25 ಕೋಟಿ ವಲಸೆ ಕಾರ್ಮಿಕರು ಆತ್ಮ ನಿರ್ಭರ್ ಭಾರತ ಕಾರ್ಯಕ್ರಮದ ಲಾಭ ಪಡೆಯುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.