ADVERTISEMENT

ಇಂಧನ ಆಮದು ಅವಲಂಬನೆ ತಗ್ಗಿಸಿದ್ದರೆ ಮಧ್ಯಮ ವರ್ಗಕ್ಕೆ ಹೊರೆಯಾಗುತ್ತಿರಲಿಲ್ಲ: ಮೋದಿ

ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಬದ್ಧ ಎಂದ ಪ್ರಧಾನಿ

ಪಿಟಿಐ
Published 17 ಫೆಬ್ರುವರಿ 2021, 13:04 IST
Last Updated 17 ಫೆಬ್ರುವರಿ 2021, 13:04 IST
ಪ್ರಧಾನಿ ನರೇಂದ್ರ ಮೋದಿ – ಪಿಟಿಐ ಸಂಗ್ರಹ ಚಿತ್ರ
ಪ್ರಧಾನಿ ನರೇಂದ್ರ ಮೋದಿ – ಪಿಟಿಐ ಸಂಗ್ರಹ ಚಿತ್ರ   

ನವದೆಹಲಿ: ದೇಶದಾದ್ಯಂತ ಏಕರೂಪದ ದರ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ನೈಸರ್ಗಿಕ ಅನಿಲವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಹಮ್ಮಿಕೊಳ್ಳಲಾಗಿರುವ ತೈಲ ಮತ್ತು ಅನಿಲ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತವು ತೈಲ ಮತ್ತು ಅನಿಲ ಮೂಲಸೌಕರ್ಯ ನಿರ್ಮಾಣಕ್ಕೆ 5 ವರ್ಷಗಳಿಗೆ ₹7.5 ಲಕ್ಷ ಕೋಟಿ ವ್ಯಯಿಸುತ್ತಿದೆ’ ಎಂದು ಹೇಳಿದ್ದಾರೆ.

‘ಹಿಂದಿನ ಸರ್ಕಾರಗಳು ದೇಶದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡುವತ್ತ ಗಮನಹರಿಸಿದ್ದರೆ ಈಗ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ’ ಎಂದೂ ಮೋದಿ ಹೇಳಿದ್ದಾರೆ.

ಪೆಟ್ರೋಲ್ ಬೆಲೆ ₹100ರ ಸನಿಹ ತಲುಪಿರುವ ಹಾಗೂ ಇಂಧನ ದರ ಸತತವಾಗಿ ಏರಿಕೆಯಾಗುತ್ತಿರುವ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ.

‘2019–20ನೇ ಸಾಲಿನಲ್ಲಿ ದೇಶದ ಒಟ್ಟು ಅಗತ್ಯದ ಶೇ 85ರಷ್ಟು ತೈಲವನ್ನು ಹಾಗೂ ಶೇ 53ರಷ್ಟು ಅನಿಲವನ್ನು ಆಮದು ಮಾಡಿಕೊಳ್ಳಲಾಗಿದೆ. ನಾವು ಆಮದು ಅವಲಂಬಿತರಾಗಿರಬೇಕೇ? ನಾನು ಯಾರನ್ನೂ ಟೀಕಿಸಲು ಬಯಸುತ್ತಿಲ್ಲ. ಆದರೆ, ಈ ವಿಷಯದ ಬಗ್ಗೆ ನಾವು ಮೊದಲೇ ಗಮನಹರಿಸಿದ್ದರೆ ಇಂದು ಮಧ್ಯಮ ವರ್ಗದ ಜನಕ್ಕೆ ಹೊರೆಯಾಗುತ್ತಿರಲಿಲ್ಲ’ ಎಂದೂ ಪ್ರಧಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.