ನವದೆಹಲಿ: ‘ಇಡೀ ವಿಶ್ವವೇ ಕೋವಿಡ್–19 ವಿರುದ್ಧ ಹೋರಾಡುತ್ತಿರುವಾಗ ಕೆಲವರು ಭಯೋತ್ಪಾದನೆ, ಸುಳ್ಳು ಸುದ್ದಿಯಂತಹ ಮಾರಕ ವೈರಸ್ ಹರಡುವ ಮೂಲಕ ಸಮುದಾಯ ಮತ್ತು ದೇಶಗಳನ್ನು ಒಡೆಯುವ ಕೃತ್ಯಗಳಲ್ಲಿ ನಿರತರಾಗಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಲಿಪ್ತ ನೀತಿ ಒಪ್ಪಿಕೊಂಡಿರುವ ರಾಷ್ಟ್ರಗಳ ಶೃಂಗಸಭೆ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಕೋವಿಡ್–19 ವಿರುದ್ಧದ ಹೋರಾಟದ ಬಗ್ಗೆಯೇ ಹೆಚ್ಚು ಒತ್ತು ನೀಡಿದರು.
‘ಈ ಬಿಕ್ಕಟ್ಟಿನ ಸಮಯದಲ್ಲಿ ನಾವು ಪ್ರಜಾಪ್ರಭುತ್ವ, ಶಿಸ್ತು, ಶೀಘ್ರ ನಿರ್ಧಾರಗಳ ಮೂಲಕ ಕೊರೊನಾ ವಿರುದ್ಧದ ಹೋರಾಟವನ್ನು ಜನತೆಯ ಹೋರಾಟವನ್ನಾಗಿ ಮಾಡಿದೆವು. ಭಾರತದ ನಾಗರಿಕತೆಯು ಇಡೀ ವಿಶ್ವವನ್ನೇ ಒಂದು ಕುಟುಂಬವನ್ನಾಗಿ ನೋಡುತ್ತದೆ. ನಾವು ನಮ್ಮ ನಾಗರಿಕರ ಬಗ್ಗೆ ಕಾಳಜಿ ವಹಿಸುತ್ತೇವೆ. ಜತೆಗೆ ಇದರ ದೇಶಗಳಿಗೂ ಸಹಾಯ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ನಮ್ಮ ಅಗತ್ಯತೆಗಳ ಹೊರತಾಗಿ 59 ಅಲಿಪ್ತ ಸದಸ್ಯ ರಾಷ್ಟ್ರಗಳನ್ನೂ ಒಳಗೊಂಡು 123 ದೇಶಗಳಿಗೆ ಔಷಧ ಪೂರೈಕೆ ಮಾಡುವ ಬಗ್ಗೆ ಖಚಿತ ಭರವಸೆ ನೀಡಿದ್ದೇವೆ. ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲೂ ಕೈಜೋಡಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.