ನವದೆಹಲಿ: ಉತ್ತರಾಖಂಡದಲ್ಲಿ ‘ನಮಾಮಿ ಗಂಗೆ’ ಯೋಜನೆ ಅಡಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಆರು ಬೃಹತ್ ಯೋಜನೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
68 ಎಂಎಲ್ಡಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ) ನಿರ್ಮಾಣ, ಹರಿದ್ವಾರದ ಚಾಂಡಿ ಘಾಟ್ನಲ್ಲಿ ‘ಗಂಗಾ ಅವಲೋಕನ್’ ವಸ್ತುಸಂಗ್ರಹಾಲಯ, ಹರಿದ್ವಾರದ ಜಗ್ಜೀತ್ಪುರದಲ್ಲಿ ಅಸ್ತಿತ್ವದಲ್ಲಿರುವ 27 ಎಂಎಲ್ಡಿ ಎಸ್ಟಿಪಿ ಘಟಕಗಳ ನವೀಕರಣ ಮತ್ತು ಸರಾಯ್ನಲ್ಲಿ 18 ಎಂಎಲ್ಡಿ ಎಸ್ಟಿಪಿ ನಿರ್ಮಾಣ ಯೋಜನೆಗಳು ಸೇರಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಇದೇ ಸಂದರ್ಭದಲ್ಲಿ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಮತ್ತು ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿದ್ಧಪಡಿಸಿರುವ ‘ರೋಯಿಂಗ್ ಡೌನ್ ದಿ ಗಂಗಾ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಗಂಗಾ ಸಮೀಪದ 17 ಪಟ್ಟಣಗಳಲ್ಲಿ ಮಾಲಿನ್ಯ ನಿಯಂತ್ರಿಸಲು ಉತ್ತರಾಖಂಡದಲ್ಲಿ ಎಲ್ಲಾ 30 ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ.
ಗ್ರಾಮ ಪಂಚಾಯಿತಿಗಳಿಗಾಗಿ ‘ಜಲ್ ಜೀವನ್ ಮಿಷನ್’ ಮತ್ತು ‘ಮಾರ್ಗದರ್ಶಿಕಾ’, ‘ಪಾಣಿ ಸಮಿತಿ’ ಲಾಂಛನವನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ನಮಾಮಿ ಗಂಗೆ’ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಗಂಗಾ ನದಿ ಶುದ್ಧೀಕರಣ ಹಾಗೂ ನದಿ ವ್ಯಾಪ್ತಿಯಲ್ಲಿ ಮಾಲಿನ್ಯದ ಪ್ರಮಾಣವನ್ನು ತಗ್ಗಿಸುವುದು ಯೋಜನೆಯ ಮುಖ್ಯ ಉದ್ದೇಶ. ತ್ಯಾಜ್ಯ ನಿರ್ವಹಣೆ, ನದಿಪಾತ್ರ ಅಭಿವೃದ್ಧಿ, ಅರಣ್ಯೀಕರಣ, ಗ್ರಾಮೀಣ ನೈರ್ಮಲ್ಯ ಸೌಲಭ್ಯ, ಜೀವವೈವಿಧ್ಯ ರಕ್ಷಣೆ ಮೊದಲಾದ ಆಯಾಮಗಳನ್ನು ಯೋಜನೆ ಒಳಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.