ADVERTISEMENT

‌ಪ್ರಧಾನಿ ತೆಲಂಗಾಣ ಭೇಟಿ: ಈ ಬಾರಿಯೂ ‘ಶಿಷ್ಟಾಚಾರ‘ ಮುರಿಯಲಿರುವ ಕೆಸಿಆರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2022, 4:36 IST
Last Updated 12 ನವೆಂಬರ್ 2022, 4:36 IST
   

ಹೈದರಾಬಾದ್‌: ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ತೆಲಂಗಾಣಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬರ ಮಾಡಿಕೊಳ್ಳಲು ಈ ಬಾರಿಯೂ ಮುಖ್ಯಮಂತ್ರಿ ಚಂದ್ರಶೇಖರ್ ರಾವ್‌ ಅವರು ತೆರಳುವುದಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಧಾನಿ ಮೋದಿ ಶನಿವಾರ ಬೆಳಿಗ್ಗೆ ಬೇಗಂಪೇಟ್‌ ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ. ‌ತೆಲಂಗಾಣ ಸಚಿವ ತಲಸಾಣಿ ಶ್ರೀನಿವಾಸ ಯಾದವ್‌ ಪ್ರಧಾನಿ ಮೋದಿಯವರನ್ನು ಏರ್‌ಪೋರ್ಟ್‌ನಲ್ಲಿ ಬರಮಾಡಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗೆಲ್ಲಾ ಏರ್‌ಪೋರ್ಟ್‌ನಲ್ಲಿ ಪ್ರಧಾನಿಗಳನ್ನು ಬರ ಮಾಡಿಕೊಳ್ಳುವ ‘ಶಿಷ್ಟಾಚಾರ‘ವನ್ನು ಕೆಸಿಆರ್‌ ಮುರಿದಿದ್ದಾರೆ. ಈ ಭೇಟಿ ವೇಳೆಯೂ ಅದು ಮುಂದುವರಿಯಲಿದೆ.

ADVERTISEMENT

ಕೆಸಿಆರ್ ಅವರ ಈ ನಡೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ‘ಪ್ರಧಾನಿಗೆ ತೋರಬೇಕಾದ ಶಿಷ್ಟಾಚಾರವನ್ನು ಕೆಸಿಆರ್‌ ಉಲ್ಲಂಘಿಸುತ್ತಿದ್ದಾರೆ‘ ಎಂದು ಹೇಳಿದೆ.

ಇನ್ನು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆಗಳನ್ನು ಕೇಳಿ ಹೈದರಾಬಾದ್‌ ಹಾಗೂ ರಾಮಗುಂಡಂನಲ್ಲಿ ಆಡಳಿತರೂಢ ಟಿಆರ್‌ಎಸ್‌ ಪಕ್ಷವು ಹಲವು ಫ್ಲೆಕ್ಸ್‌ಗಳನ್ನು ಕೂಡ ಹಾಕಿದೆ.

ಇದಕ್ಕೂ ಬಿಜೆಪಿಯಿಂದ ಖಂಡನೆ ವ್ಯಕ್ತವಾಗಿದೆ. ‘ಪ್ರಧಾನಿ ಭೇಟಿಯನ್ನು ಯಾಕೆ ರಾಜಕೀಯಗೊಳಿಸಬೇಕು? ಜನರಿಗೆ ಉಪಯೋಗವಾಗುವ ಹಲವು ಯೋಜನೆಗಳು ರಾಷ್ಟ್ರಕ್ಕೆ ಸಮರ್ಪಿಸಲು ಪ್ರಧಾನಿಯವರು ರಾಜ್ಯಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಅವರೇನು ಭಾರತದ ಪ್ರಧಾನಿಗಳಲ್ಲವೇ? ಅ‌ಥವಾ ತೆಲಂಗಾಣ ಭಾರತದ ಭಾಗವಲ್ಲವೇ?‘ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಪ್ರಶ್ನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.