ನವದೆಹಲಿ: ‘ಆರೋಗ್ಯವಂತ ವ್ಯಕ್ತಿ, ಆರೋಗ್ಯಕರ ಸಮಾಜ ಹಾಗೂ ಆರೋಗ್ಯಕರ ಆರ್ಥಿಕತೆ’ ಎಂಬಜೈನ ಮುನಿ ಆಚಾರ್ಯ ಮಹಾಪ್ರಜ್ಞ ಅವರ ಬೋಧನೆ ಸದಾ ಸ್ಫೂರ್ತಿದಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.
ಜೈನ ಮುನಿ ಆಚಾರ್ಯ ಪ್ರಜ್ಞ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೊರೊನಾ ಸೋಂಕಿನಿಂದ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ಜನರಿಗೆ, ದೇಶಕ್ಕೆ ಅವರ ಬೋಧನೆ ಮಾರ್ಗದರ್ಶಿಯಾಗಿವೆ’ ಎಂದರು.
ಆಚಾರ್ಯ ಮಹಾಪ್ರಜ್ಞ ಅವರು ಜೈನ ಧರ್ಮದ ಶ್ವೇತಾಂಬರ ತೇರಾಪಂಥದ 10ನೇ ಮುನಿ. ಅವರು ಸಂಸ್ಕೃತ, ಹಿಂದಿ, ಗುಜರಾತಿ ಹಾಗೂ ಇಂಗ್ಲಿಷ್ನಲ್ಲಿ 300ಕ್ಕೂ ಹೆಚ್ಚು ಗ್ರಂಥ ರಚಿಸಿದ್ದಾರೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ರಚಿಸಿದ ಪುಸ್ತಕವೊಂದರ ಸಹಲೇಖಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
‘ಅವರ ಬೋಧನೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ನೆಮ್ಮದಿ ತುಂಬಿದ ಕುಟುಂಬ ಮತ್ತು ಸಂಪದ್ಭರಿತ ರಾಷ್ಟ್ರ ಎಂಬ ಮುನಿಗಳ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಅವಕಾಶ ಲಭಿಸಿದೆ’ ಎಂದು ಪ್ರಧಾನಿ ಹೇಳಿದರು.
‘ಯೋಗಾಭ್ಯಾಸದ ಮೂಲಕ ಒತ್ತಡ, ಖಿನ್ನತೆ ಮುಕ್ತ ಜೀವನ ನಡೆಸುವ ಬಗೆಯನ್ನು ಅವರು ಲಕ್ಷಾಂತರ ಜನರಿಗೆ ತಿಳಿಸಿಕೊಟ್ಟಿದ್ದಾರೆ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.