ಡೆಹ್ರಾಡೂನ್: ‘ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವವರಿಗೆ ರೈತರ ಅಭಿವೃದ್ಧಿಗಿಂತಲೂ ದಲ್ಲಾಳಿಗಳ ಹಿತ ಮುಖ್ಯವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಡೆದಿದ್ದ ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂಡಿಯಾ ಗೇಟ್ ಮುಂಭಾಗದಲ್ಲಿ ಟ್ರ್ಯಾಕ್ಟರ್ ಸುಟ್ಟು ಆಕ್ರೋಶ ಹೊರಹಾಕಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮೋದಿ ‘ಅವರು ರೈತರ ಸ್ವಾತಂತ್ರ್ಯವನ್ನು ವಿರೋಧಿಸುತ್ತಿದ್ದಾರೆ. ರೈತರು ಸಂಕಷ್ಟದಲ್ಲಿಯೇ ಇರಬೇಕು. ಅವರ ಸಮಸ್ಯೆಗಳು ಮುಂದುವರಿಯುತ್ತಲೇ ಇರಬೇಕೆಂದು ಬಯಸುತ್ತಿದ್ದಾರೆ. ರೈತರು ಪೂಜಿಸುವಂತಹ ಕೃಷಿ ಉಪಕರಣಗಳನ್ನು ಸುಡುವ ಮೂಲಕ ಇಡೀ ರೈತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷದ ಹೆಸರನ್ನು ಪ್ರಸ್ತಾಪಿಸದೆ ಕಿಡಿಕಾರಿದ್ದಾರೆ.
‘ಆ ಪಕ್ಷವು ರೈತರು, ಯುವಕರು, ಸೈನಿಕರು ಹೀಗೆ ಯಾರ ಪರವೂ ಇಲ್ಲ. ಶತ್ರುಗಳ ವಿರುದ್ಧ ಸೆಣಸಿ ಹುತಾತ್ಮರಾದ ಸೈನಿಕರ ಪರಾಕ್ರಮವನ್ನು ಆ ಪಕ್ಷ ಕೊಂಡಾಡಲಿಲ್ಲ. ಬದಲಾಗಿ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ್ದರ ಕುರಿತ ದಾಖಲೆ ಕೇಳಿತ್ತು. ರಫೇಲ್ ಒಪ್ಪಂದವನ್ನೂ ವಿರೋಧಿಸಿತ್ತು. ಕಾರ್ಮಿಕ ಕಾಯ್ದೆಯು ರೈತರನ್ನು ಸಂಕೋಲೆಯಿಂದ ಬಿಡುಗಡೆ ಮಾಡಲಿದೆ. ತಾವು ಬೆಳೆದ ಬೆಳೆಯನ್ನು ತಮಗೆ ಬೇಕಾದವರಿಗೆ ಬೇಕಾದ ಬೆಲೆಗೆ ಮಾರುವ ಸ್ವಾತಂತ್ರ್ಯವನ್ನು ಒದಗಿಸಲಿದೆ’ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.