ನವದೆಹಲಿ: ಆಪರೇಷನ್ ಸಿಂಧೂರ ನಿಲ್ಲಿಸಿ ಕದನ ವಿರಾಮ ಒಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ ಕುರಿತಂತೆ ಕಾಂಗ್ರೆಸ್ ಟೀಕೆಗೈದ್ದಿದ್ದು, ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಕ್ರಿಕೆಟ್ ಪಂದ್ಯಕ್ಕೆ ಹೋಲಿಸಿ ವ್ಯಂಗ್ಯ ಮಾಡಿದೆ.
ಗೆಲುವು ಸಾಧಿಸುವ ಸಾಧ್ಯತೆ ಇರುವಾಗ ಉತ್ತಮ ನಾಯಕರು ಯಾವುದೇ ಕಾರಣಕ್ಕೂ ಮೂರನೇ ಅಂಪೈರ್ ಆದೇಶದ ಮೇರೆಗೆ ಕದನ ವಿರಾಮ ಘೋಷಿಸುವುದಿಲ್ಲ. ಭಾರತೀಯ ಕ್ರಿಕೆಟ್ ತಂಡದಿಂದ ಮೋದಿ ಕಲಿಯಬೇಕು ಎಂದು ಸೋಮವಾರ ಹೇಳಿದೆ. ಪಾಕಿಸ್ತಾನದ ವಿರುದ್ಧ ಗೆಲ್ಲಬಹುದಾಗಿದ್ದ ಯುದ್ಧದಲ್ಲಿ ಟ್ರಂಪ್ ಮಾತನ್ನು ಕೇಳಿ ನರೇಂದ್ರ ಮೋದಿ ಯುದ್ಧ ವಿರಾಮ ಘೋಷಿಸಿದರು ಎಂಬ ಅರ್ಥದಲ್ಲಿ ಕಾಂಗ್ರೆಸ್ ಟೀಕಿಸಿದೆ.
ಏಷ್ಯಾ ಕಪ್ನ ಭಾರತ-ಪಾಕಿಸ್ತಾನ ಫೈನಲ್ ಪಂದ್ಯವನ್ನು ಆಪರೇಷನ್ ಸಿಂಧೂರಕ್ಕೆ ಹೋಲಿಸಿದ್ದ ಮೋದಿ, ‘ಮೈದಾನದಲ್ಲಿ ಆಪರೇಷನ್ ಸಿಂಧೂರ.. ಫಲಿತಾಂಶ ಒಂದೇ..- ಭಾರತ ಗೆದ್ದಿದೆ! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು’ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.
ಈ ಸಂಬಂಧಿತ ಪೋಸ್ಟ್ ಅನ್ನು ಟ್ಯಾಗ್ ಮಾಡಿ, ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಪ್ರಧಾನಿ ಜೀ, ಮೊದಲನೆಯದಾಗಿ, ಕ್ರಿಕೆಟ್ ಪಂದ್ಯವನ್ನು ಯುದ್ಧಭೂಮಿಗೆ ಹೋಲಿಸುವುದು ಸರಿಯಲ್ಲ ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಬಳಿಕ, ಆದರೂ ನೀವು ಹೇಗೂ ಹೋಲಿಕೆ ಮಾಡಿದ್ದೀರಿ. ಹಾಗಾಗಿ, ಗೆಲುವಿನ ಸನಿಹದಲ್ಲಿದ್ದಾಗ ಯಾವುದೇ ಒಬ್ಬ ಉತ್ತಮ ನಾಯಕ. ಥರ್ಡ್ ಅಂಪೈರ್ ಮಾತನ್ನು ಕೇಳಿ ಯುದ್ಧ ವಿರಾಮ ಘೋಷಿಸುವುದಿಲ್ಲಎಂಬುದನ್ನು ಭಾರತ ತಂಡವನ್ನು ಮೋಡಿ ಕಲಿಯಬೇಕಿದೆ ಎಂದು ಬರೆದುಕೊಂಡಿದ್ದಾರೆ..
ಈ ಪಂದ್ಯದಲ್ಲಿ ಭಾರತ ತಂಡ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರ ವೀರೋಚಿತ ಆಟದ ನೆರವಿನಿಂದ 5 ವಿಕೆಟ್ಗಳಿಂದ ಗೆಲುವು ಸಾಧಿಸಿ, 9ನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿತ್ತು.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ, ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.