ADVERTISEMENT

ಪಿಎಂಎಲ್‌ಎ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಚಂದಾ ಕೊಚ್ಚಾರ್‌

ಪಿಟಿಐ
Published 12 ಫೆಬ್ರುವರಿ 2021, 8:06 IST
Last Updated 12 ಫೆಬ್ರುವರಿ 2021, 8:06 IST
ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್‌(ಸಂಗ್ರಹ ಚಿತ್ರ)
ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್‌(ಸಂಗ್ರಹ ಚಿತ್ರ)   

ನವದೆಹಲಿ: ಐಸಿಐಸಿಐ ಬ್ಯಾಂಕ್‌– ವಿಡಿಯೊಕಾನ್‌ ನಡುವೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಅರೋಪಿ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಅಧ್ಯಕ್ಷೆ ಚಂದಾ ಕೊಚ್ಚಾರ್ ಶುಕ್ರವಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ವಿಶೇಷ ನ್ಯಾಲಯಕ್ಕೆ ಹಾಜರಾದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಜ.30ರಂದು ವಿಚಾರಣೆಗೆ ಹಾಜರಾಗುವಂತೆ ಚಂದಾ ಕೊಚ್ಚಾರ್‌, ಅವರ ಪತಿ ದೀಪಕ್ ಕೊಚ್ಚಾರ್, ವಿಡಿಯೊಕಾನ್ ಸಮೂಹದ ಪ್ರವರ್ತಕ(ಪ್ರೊಮೊಟರ್‌) ವೇಣುಗೋಪಾಲ್ ಧೂತ್‌ ಮತ್ತು ಇತರೆ ಆರೋಪಿಗಳಿಗೆ ನೋಟಿಸ್ ಚಾರಿ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಎಲ್ಲರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಸಿತ್ತು.

ಚಂದಾ ಕೊಚ್ಚಾರ್‌ ಅವರು ಪಿಎಂಎಲ್‌ಎ ನ್ಯಾಯಾಲಯದ ವಿಶೇಷ ನ್ಯಾಯಮೂರ್ತಿ ಎ.ಎ.ನಂದಗಾಂವ್‌ಕಾರ್ನಾಡ್ ಎದುರು ಹಾಜರಾಗಿ, ತಮ್ಮ ವಕೀಲ ವಿಜಯ್ ಅಗರ್ವಾಲ್ ಮೂಲಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು. ಈ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯ, ಜಾರಿ ನಿರ್ದೇಶನಾಲಯವನ್ನು ಕೇಳಿದೆ.

ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಾರ್, ಧೂತ್ ಮತ್ತು ಇತರರ ವಿರುದ್ಧ ಸಿಬಿಐ ದಾಖಲಿಸಿದ ಎಫ್‌ಐಆರ್ ಆಧರಿಸಿ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದೀಪಕ್ ಕೊಚ್ಚಾರ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು

ವಿಡಿಯೊಕಾನ್‌ ಸಮೂಹಕ್ಕೆ ಬ್ಯಾಂಕ್‌ನಿಂದ ಸಾಲ ನೀಡುವ ಮೂಲಕ ಅಕ್ರಮ ಹಣ ವರ್ಗಾವಣೆಗೆ
ನೆರವು ನೀಡಲಾಗಿದೆ ಎಂಬುದಕ್ಕೆ ಸಂಬಂಧಿಸಿ ಚಂದಾ ಮತ್ತು ಅವರ ಪತಿ ದೀಪಕ್‌ ಕೊಚ್ಚಾರ್‌ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆಯನ್ನು ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.