ADVERTISEMENT

ಸಮಸ್ಯೆ ಆಲಿಸುವ ಬದಲು 'ಮನ್ ಕೀ ಬಾತ್' ಆಡಿದ ಪ್ರಧಾನಿ; ಜಾರ್ಖಂಡ್ ಸಿಎಂ ಅಸಮಾಧಾನ

ಪಿಟಿಐ
Published 7 ಮೇ 2021, 6:38 IST
Last Updated 7 ಮೇ 2021, 6:38 IST
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್   

ನವದೆಹಲಿ: ದೂರವಾಣಿ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ವ್ಯಾಪಿಸಿರುವ ಕೋವಿಡ್-19 ಬಿಕ್ಕಟ್ಟಿನ ಪರಿಸ್ಥಿತಿಯ ಗಂಭೀರತೆಯನ್ನು ಅರಿಯುವ ಬದಲು 'ಮನ್ ಕೀ ಬಾತ್' ಆಡುತ್ತಿದ್ದರು ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರದಂದು ಜಾರ್ಖಂಡ್, ಆಂಧ್ರ ಪ್ರದೇಶ, ಒಡಿಶಾ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳೊಂದಿಗೆ ಕೋವಿಡ್ ಪರಿಸ್ಥಿತಿಯ ಬಗ್ಗೆ ಅವಲೋಕಿಸಲು ಪ್ರಧಾನಿ ಮಂತ್ರಿ ದೂರವಾಣಿ ಕರೆ ಮಾಡಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಸೊರೇನ್, ಇಂದು (ಗುರುವಾರ) ಗೌರವಾನ್ವಿತ ಪ್ರಧಾನ ಮಂತ್ರಿ ದೂರವಾಣಿ ಕರೆ ಮಾಡಿದ್ದಾರೆ. ಅವರು 'ಮನ್ ಕೀ ಬಾತ್' ಮಾತ್ರ ಆಡಿದ್ದಾರೆ. ಅವರು ವಿಷಯದ ಬಗ್ಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಲು ಅವಕಾಶ ನೀಡದಿರುವುದು ಸೊರೆನ್ ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರಧಾನಿ ಒಬ್ಬರೇ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ದೈನಂದಿನ ಕೋವಿಡ್-19 ಸಾವುಗಳಲ್ಲಿ ಶೇಕಡಾ 75ರಷ್ಟು ಸಾವಿಗೆ ಕಾರಣವಾಗಿರುವ 10 ರಾಜ್ಯಗಳಲ್ಲಿ ಜಾರ್ಖಂಡ್ ಕೂಡಾ ಸೇರಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ದೆಹಲಿ, ಛತ್ತೀಸಗಡ, ಹರಿಯಾಣ, ಪಂಜಾಬ್, ತಮಿಳುನಾಡು ಮತ್ತು ರಾಜಸ್ಥಾನ ಈ ಪಟ್ಟಿಯಲ್ಲಿರುವ ಇತರೆ ರಾಜ್ಯಗಳಾಗಿವೆ. ಗುರುವಾರದಂದು ಜಾರ್ಖಂಡ್‌ನಲ್ಲಿ 133 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.