
ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
ವಾರಾಣಸಿ, ಉತ್ತರಪ್ರದೇಶ: ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಬಂಧಿಸಲು ಬಂದರೆ ನಾನು ವಿರೋಧಿಸುವುದಿಲ್ಲ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ವಾರಾಣಸಿಗೆ ಬಂದಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ನನ್ನ ವಿರುದ್ಧ ಹೆಣೆಯಲಾಗಿರುವ ಕಲ್ಪಿತ ಕಥೆಯ ಅಸಲಿಯತ್ತು ಆದಷ್ಟು ಬೇಗ ಹೊರ ಬರಲಿದೆ ಎಂದ ಅವರು, ಇಲ್ಲಿ ಮೂರು ನ್ಯಾಯಾಲಯಗಳಿವೆ. ಒಂದು, ಜನತಾ ಕೋರ್ಟ್, ಅದಕ್ಕೆ ಯಾರು ಹೇಗೆ, ಏನು ನಡೆಯುತ್ತಿದೆ ಎನ್ನುವುದು ಸರಿಯಾಗಿ ಗೊತ್ತಾಗಲಿದೆ. ಎರಡನೆಯದ್ದು, ಮನಸಾಕ್ಷಿ, ಮೂರನೇಯದ್ದು, ಸುಪ್ರೀಂ ಕೋರ್ಟ್. ಸುಪ್ರೀಂ ಕೋರ್ಟ್ ಸರಿ ಯಾವುದು? ತಪ್ಪು ಯಾವುದು ಎಂಬುದನ್ನು ಹೇಳಿ ಮುಗಿಸಲಿದೆ ಎಂದಿದ್ದಾರೆ.
ಈ ಎಲ್ಲ ಮೂರು ನ್ಯಾಯಾಲಯಗಳಿಂದ ನಾನು ದೋಷಮುಕ್ತ ಎನ್ನುವುದು ಗೊತ್ತಾಗಲಿದೆ ಎಂದು ಅವರು ತಿಳಿಸಿದರು.
ಮಾಘಮೇಳದಲ್ಲಿ ಎಲ್ಲ ಕಡೆ ಸಿಸಿಟಿವಿ ಕಣ್ಗಾವಲು ಇತ್ತು. ಮಾಧ್ಯಮದವರ ಕಣ್ಗಾವಲೂ ಇತ್ತು. ಈ ಆಧಾರಗಳನ್ನು ಬಿಡುಗಡೆ ಮಾಡಲಿ, ವಿಡಿಯೊ ಇದಾವೆ ಎನ್ನುವರು ಇನ್ನೂ ಏಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಇನ್ನು, ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ವಿರುದ್ಧ ಬಂದಿರುವ ಆರೋಪಗಳ ಕುರಿತು ಉನ್ನತ ತನಿಖೆಗೆ ನಿರ್ದೇಶಿಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಮಾಘಮೇಳದ ವೇಳೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಉತ್ತರಾಖಂಡದ ಜ್ಯೋತೀರ್ಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಯಾಗರಾಜ್ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಪ್ರಯಾಗರಾಜ್ನ ಪೋಕ್ಸೊ ವಿಶೇಷ ನ್ಯಾಯಾಲಯವೊಂದು ಇತ್ತೀಚೆಗೆ ಆದೇಶ ನೀಡಿತ್ತು. ಆದೇಶದಂತೆ, ಝೂಸಿ ಪೊಲೀಸ್ ಠಾಣೆಯಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ, ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ಹಾಗೂ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಾರಾಣಸಿಯಲ್ಲಿರುವ ಆಶ್ರಮದಲ್ಲಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅರೋಪಿಸಿ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್ನ ಅಧ್ಯಕ್ಷ ಅಶುತೋಷ್ ಬ್ರಹ್ಮಚಾರಿ ಅರ್ಜಿಯನ್ನು ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.