ADVERTISEMENT

ಖಾಸಗಿ ಆಸ್ಪತ್ರೆಗೆ ತುರ್ತಾಗಿ ಆಮ್ಲಜನಕ ವ್ಯವಸ್ಥೆ ಮಾಡಿದ ದೆಹಲಿ ಪೊಲೀಸರು

ಪಿಟಿಐ
Published 21 ಏಪ್ರಿಲ್ 2021, 11:13 IST
Last Updated 21 ಏಪ್ರಿಲ್ 2021, 11:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯ ಜನಕಪುರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ‘ಆಮ್ಲಜನಕ ಕೊರತೆಯಾಗಿದೆ‘ ಎಂಬ ಆತಂಕದ ಸುದ್ದಿಯೊಂದನ್ನು ಕೇಳಿದ ದೆಹಲಿ ಪೊಲೀಸರು ಕೂಡಲೇ ನಗರದ ವಿವಿಧ ಭಾಗಗಳಿಂದ 11 ಆಮ್ಲಜನಕದ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಿ, ರೋಗಿಗಳ ಚಿಕಿತ್ಸೆಗೆ ನೆರವಾಗಿದ್ದಾರೆ.

‘ಜನಕಪುರಿ ಪ್ರದೇಶದ ಅಮರ್‌ಲೀಲಾ ಆಸ್ಪತ್ರೆಯಿಂದ ಬೆಳಿಗ್ಗೆ 9 ಗಂಟೆ ಸುಮಾರಿಗೆ ನನಗೊಂದು ದೂರವಾಣಿ ಕರೆ ಬಂತು. ಫೋನ್ ಮಾಡಿದವರು ‘ನಮ್ಮ ಆಸ್ಪತ್ರೆಯಲ್ಲಿ ಆಮ್ಲಜನಕ ದಾಸ್ತಾನು ಮುಗಿದಿದೆ. ಎಲ್ಲಾದರೂ ವ್ಯವಸ್ಥೆ ಮಾಡಿಕೊಡಿ‘ ಎಂದು ಆತಂಕದಿಂದ ಕೇಳಿದರು. ಆ ಆಸ್ಪತ್ರೆಯಲ್ಲಿ 32 ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು‘ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

‘ತಕ್ಷಣ ನಮ್ಮ ಪೊಲೀಸರು ಸ್ಥಳೀಯ ಆಮ್ಲಜನಕ ವಿತರಕರನ್ನು ಸಂಪರ್ಕಿಸಿದರು. ವೈದ್ಯಕೀಯ ಆಮ್ಲಜನಕ ಎಲ್ಲೆಲ್ಲಿ ಸಿಗುತ್ತದೆ ಎಂದು ಮಾಹಿತಿ ಪಡೆದರು.ನಂತರ ಕೀರ್ತಿ ನಗರ್, ಗೊಲೆ ಮಾರ್ಕೆಟ್ ಮತ್ತು ಮಾಯಾಪುರಿಯಲ್ಲಿದ್ದ ವಿವಿಧ ಆಸ್ಪತ್ರೆಗಳಿಂದ ಹನ್ನೊಂದು ಆಮ್ಲಜನಕದ ಸಿಲಿಂಡರ್‌ಗಳನ್ನು ಸಂಗ್ರಹಿಸಿ, ಅಮರ್‌ಲೀಲಾ ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾದೆವು‘ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಪ್ರಿಯಾ ಗೌತಮ್ ತಿಳಿಸಿದರು.

ADVERTISEMENT

ಇದಾದ ನಂತರ ಪೊಲೀಸರು ವಿವಿಧ ಆಮ್ಲಜನಕ ವಿತರಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಾವುದೇ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಅಗತ್ಯವಿದ್ದರೆ, ನೆರವಾಗಲು ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.