ADVERTISEMENT

ನಿವೃತ್ತರಾದರೂ ಸರ್ಕಾರಿ ಬಂಗಲೆ ಖಾಲಿ ಮಾಡದ ಪಾಂಡಿಚೇರಿ ವಿ.ವಿ. ಕುಲಪತಿ

ಪಿಟಿಐ
Published 19 ಫೆಬ್ರುವರಿ 2023, 10:44 IST
Last Updated 19 ಫೆಬ್ರುವರಿ 2023, 10:44 IST
.
.   

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿ ಮೂರು ವರ್ಷ ಕಳೆದರೂ ಪ್ರಸ್ತುತ ಪಾಂಡಿಚೇರಿ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಗುರ್ಮೀತ್‌ ಸಿಂಗ್‌ ಅವರು ತಮ್ಮ ಹಿಂದಿನ ವಿ.ವಿ.ಯ ಸರ್ಕಾರಿ ಬಂಗಲೆಯಲ್ಲೇ ಮುಂದುವರಿದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಂಗ್‌ ಅವರು ದಂಡ ಸಹಿತ ಬಾಡಿಗೆ ಮತ್ತು ನೀರಿನ ಶುಲ್ಕ ಸೇರಿ ₹23.70 ಲಕ್ಷ ಪಾವತಿಸಬೇಕಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯ ಹೇಳಿದೆ.

ಕೋವಿಡ್‌ ಸಂದರ್ಭದಲ್ಲಿ ಹೇರಿದ್ದ ಲಾಕ್‌ಡೌನ್‌ ಮತ್ತು ಇತರ ಕಾರಣಗಳಿಂದ ಸರ್ಕಾರಿ ಬಂಗಲೆಯಲ್ಲೇ ಮುಂದುವರಿದಿದ್ದೇನೆ ಎಂದು ಗುರ್ಮೀತ್‌ ಸಿಂಗ್‌ ಅವರು ಹೇಳಿದ್ದಾರೆ.

ADVERTISEMENT

‘ದೆಹಲಿ ವಿಶ್ವವಿದ್ಯಾಲಯವು ನನಗೆ ಅನ್ಯಾಯ ಮಾಡಿದೆ. ನನ್ನ ನಿವೃತ್ತಿ ನಿಧಿಯ ₹50 ಲಕ್ಷವನ್ನು ಇನ್ನೂ ಪಾವತಿಸಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.

‘ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಬೇಕು ಇಲ್ಲದಿದ್ದರೆ ವಿದ್ಯುತ್‌ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು’ ಎಂದು ದೆಹಲಿ ವಿಶ್ವವಿದ್ಯಾಲಯವು ಸಿಂಗ್‌ ಅವರಿಗೆ ಕಳೆದ ವಾರ ನೋಟಿಸ್‌ ನೀಡಿತ್ತು. ಇದು ವಿಶ್ವವಿದ್ಯಾಲಯ ನೀಡಿರುವ ಒಂಬತ್ತನೇ ನೋಟಿಸ್‌ ಆಗಿದೆ.

ಸಿಂಗ್‌ ಅವರು 2019 ಅಕ್ಟೋಬರ್‌ನಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿದ್ದರು. 2017ರಲ್ಲೇ ಅವರು ಪಾಂಡಿಚೆರಿ ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಅಧಿಕಾರ ಸ್ವೀಕರಿಸಿದ್ದರು. ಬಳಿಕ ಅಲ್ಲಿ ಅವರ ಸೇವಾವಧಿಯನ್ನು ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.