ಕೊಚ್ಚಿ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಹುದ್ದೆಯಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಲಾಗಿದೆ. ಪೋಪ್ ಫ್ರಾನ್ಸಿಸ್ ಈ ಆದೇಶ ನೀಡಿದ್ದಾರೆ ಎಂದು ಭಾರತೀಯ ಕ್ಯಾಥೊಲಿಕ್ ಬಿಷಪ್ ಸಮಿತಿ (ಸಿಬಿಸಿಐ) ತಿಳಿಸಿದೆ.
ಜಲಂಧರ್ನಲ್ಲಿರುವ ಚರ್ಚ್ನ ಮೇಲ್ವಿಚಾರಕರಾಗಿ ಆಂಗ್ನೆಲೊ ರುಫಿನೊ ಗ್ರೇಸಿಯಸ್ ಅವರನ್ನು ತಕ್ಷಣ ಜಾರಿಗೆ ಬರುವಂತೆ ನೇಮಿಸಿ ಆದೇಶಿಸಲಾಗಿದೆ.ಬಿಷಪ್ ಫ್ರಾಂಕೊ ಅವರು ವಿಶೇಷ ತನಿಖಾ ದಳದ ಎದುರು ಗುರುವಾರ ಎರಡನೇ ದಿನದ ವಿಚಾರಣೆಗೆ ಹಾಜರಾಗಿರುವಾಗಲೇ ಈ ಆದೇಶ ಹೊರಬಿದ್ದಿದೆ.
ತಾತ್ಕಾಲಿಕವಾಗಿ ಹುದ್ದೆಯಿಂದ ಬಿಡುಗಡೆ ಬಯಸಿ ಫ್ರಾಂಕೊ ಅವರು ಸೆಪ್ಟೆಂಬರ್ 16ರಂದು ಬರೆದಿದ್ದ ಪತ್ರವನ್ನು ಪರಿಗಣಿಸಿ ಪೋಪ್ ಫ್ರಾನ್ಸಿಸ್ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ವಕ್ತಾರ ವರ್ಗೀಸ್ ವಲ್ಲಿಕಟ್ಟು ತಿಳಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಕೇರಳ ಪೊಲೀಸರು ಸಮನ್ಸ್ ನೀಡಿದ ಬಳಿಕ ಫ್ರಾಂಕೊ ಪತ್ರ ಬರೆದಿದ್ದರು.
***
ಕ್ರೈಸ್ತ ಸನ್ಯಾಸಿನಿ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಕೆ:ಕೇರಳ ಶಾಸಕ ಜಾರ್ಜ್ ವಿರುದ್ಧ ಹೊಸ ಸಮನ್ಸ್
ನವದೆಹಲಿ: ಕೇರಳ ಶಾಸಕ ಪಿ.ಸಿ ಜಾರ್ಜ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಮತ್ತೆ ಸಮನ್ಸ್ ಜಾರಿಮಾಡಿದೆ.ಅಕ್ಟೋಬರ್ 4ರೊಳಗೆ ಹಾಜರಾಗುವಂತೆ ಆಯೋಗ ಸೂಚಿಸಿದೆ.ಪಾದ್ರಿ ಫ್ರಾಂಕೊ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಕ್ರೈಸ್ತ ಸನ್ಯಾಸಿನಿ ವಿರುದ್ಧ ಶಾಸಕರು ಆಕ್ಷೇಪಾರ್ಹ ಭಾಷೆ ಬಳಸಿದರು ಎನ್ನಲಾಗಿದೆ.
ಈ ಮೊದಲು ಸಮನ್ಸ್ ನೀಡಿದ್ದ ಆಯೋಗ, ಗುರುವಾರ ವಿಚಾರಣೆಗೆ ಹಾಜರಾಗುವಂತೆ ಆಯೋಗ ಸೂಚಿಸಿತ್ತು. ಆಯೋಗದ ಪತ್ರ ಸೆಪ್ಟೆಂಬರ್ 17ರಂದು ಕೈಸೇರಿದ್ದು, ಇಷ್ಟು ಕಡಿಮೆ ಸಮಯದಲ್ಲಿ ದೆಹಲಿಗೆ ಬರಲು ಸಾಧ್ಯವಾಗದು ಎಂದು ಜಾರ್ಜ್ ಹೇಳಿದ್ದರು.
‘ಕಚೇರಿ ಕೆಲಸಗಳು ಸೇರಿದಂತೆ ಶಾಸಕನಾಗಿ ಹಲವು ಕೆಲಸ ಬಾಕಿ ಇವೆ. ಕೇರಳ ಪ್ರವಾಹ ಪರಿಹಾರ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಹೊಂದಾಣಿಕೆ ಮಾಡಿಕೊಂಡು ಬರಬೇಕಿರುವ ಕಾರಣ ಸಾಕಷ್ಟು ಸಮಯ ನೀಡಿ’ ಎಂದು ಅವರು ಮನವಿ ಮಾಡಿದ್ದರು.
‘ಸನ್ಯಾಸಿನಿ ವಿರುದ್ಧ ಜಾರ್ಜ್ ಬಳಸಿರುವ ಭಾಷೆ ಕೀಳಾಗಿದೆ. ಇದು ನಾಚಿಕೆಗೇಡು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ನೀಡಿದ ಈ ಹೇಳಿಕೆಯನ್ನು ಆಯೋಗ ಖಂಡಿಸುತ್ತದೆ’ ಎಂದು ಮುಖ್ಯಸ್ಥೆ ರೇಖಾ ಶರ್ಮಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.