ADVERTISEMENT

ಕರ್ನಾಟಕ–ಮಹಾರಾಷ್ಟ್ರ ಗಡಿ ಗಲಾಟೆಗೆ ಕೇಂದ್ರ ಮಧ್ಯ ಪ್ರವೇಶ

ಗಡಿ ವಿವಾದ ರಸ್ತೆಯಲ್ಲಿ ನಿಂತು ಬಗೆಹರಿಸಲು ಸಾಧ್ಯವಿಲ್ಲ: ಅಮಿತ್‌ ಶಾ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 15:36 IST
Last Updated 14 ಡಿಸೆಂಬರ್ 2022, 15:36 IST
   

ನವದೆಹಲಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ಗಲಾಟೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದ್ದು, ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ಪ್ರತ್ಯೇಕ ಸಮಿತಿ ರಚಿಸಲು ನಿರ್ಧರಿಸಲಾಗಿದೆ.

ಉಭಯ ರಾಜ್ಯಗಳ ಗಡಿ ವಿವಾದ ರಸ್ತೆಯಲ್ಲಿ ನಿಂತು ಬಗೆಹರಿಸುವ ವಿಷಯವಲ್ಲ. ಸಂವಿಧಾನಬದ್ಧವಾಗಿ ವಿವಾದ ಇತ್ಯರ್ಥಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಇತ್ಯರ್ಥ ಹಾಗೂ ಸಾಂವಿಧಾನಿಕ ಪರಿಹಾರಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳ ಜೊತೆ ಅಮಿತ್‌ ಶಾ ಸಭೆ ನಡೆಸಿದರು.

ADVERTISEMENT

ಬಳಿಕ ಟ್ವೀಟ್‌ ಮಾಡಿರುವ ಅವರು, ಉಭಯ ರಾಜ್ಯಗಳಿಂದ ತಲಾ ಮೂವರು ಮಂತ್ರಿಗಳಂತೆ ಒಟ್ಟು ಆರು ಮಂತ್ರಿಗಳ ಸಮಿತಿ ರಚನೆ ಮಾಡಲಾಗುವುದು. ಅವರು ಒಟ್ಟಿಗೆ ಕುಳಿತು ಇದರ ಬಗ್ಗೆ ವಿಸ್ತೃತ ಚಿಂತನೆ, ಚರ್ಚೆ ನಡೆಸಲಿದ್ದಾರೆ. ಎರಡೂ ರಾಜ್ಯಗಳ ನಡುವೆ ಇನ್ನೂ ಕೆಲವು ಸಣ್ಣಪುಟ್ಟ ವಿವಾದಗಳಿವೆ. ಅದು ಸಾಮಾನ್ಯವಾಗಿ ಉಭಯ ರಾಜ್ಯಗಳ ನಡುವೆ ಇರುತ್ತದೆ. ಇದನ್ನು ಕೂಡ ಈ ಸಮಿತಿಯೇ ಬಗೆಹರಿಸಲಿದೆ ಎಂದರು.

ಭಾರತ ಸರ್ಕಾರದ ಭೂ ವಿವಾದ ಅಧಿಕಾರಿಗಳೊಂದಿಗೆ ಉತ್ತಮ ವಾತಾವರಣದಲ್ಲಿ ಮಾತುಕತೆ ನಡೆಯಿತು. ಇಬ್ಬರು ಮುಖ್ಯಮಂತ್ರಿಗಳ ಸಕಾರಾತ್ಮಕ ಧೋರಣೆ ತೋರಿಸಿದ್ದಾರೆ. ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.ಸುಪ್ರೀಂ ಕೋರ್ಟ್ ನಿರ್ಣಯ ಹೊರಬರುವವರೆಗೆ ಯಾವುದೇ ರಾಜ್ಯದ ಬಗ್ಗೆ ಒಬ್ಬರ ಮೇಲೊಬ್ಬರು ಆರೋಪಿಸುವುದಿಲ್ಲ ಎಂದು ಶಾ ಹೇಳಿದ್ದಾರೆ.

ಎರಡೂ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲಿದೆ. ಇತರ ಭಾಷೆಯ ಪ್ರವಾಸಿಗರು, ವ್ಯಾಪಾರಿಗಳು ಅಥವಾ ಜನರಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ‌ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರ ಕುರಿತು ಕೇಂದ್ರ ಗೃಹಸಚಿವ ಅಮಿತ್ ಶಾ ಕರೆದಿದ್ದ ಸಭೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.