ADVERTISEMENT

ಕುಲಭೂಷಣ ಜಾಧವ್‌ ಬಿಡುಗಡೆಗೆ ಪಾಕ್‌ ಮನವೊಲಿಕೆ ಯತ್ನ

ಭಾರತದ ಪರ ಐಸಿಜೆಯಲ್ಲಿ ವಾದ ಮಂಡಿಸಿದ ವಕೀಲ ಸಾಳ್ವೆ ಹೇಳಿಕೆ

ಪಿಟಿಐ
Published 3 ಮೇ 2020, 18:19 IST
Last Updated 3 ಮೇ 2020, 18:19 IST
   

ನವದೆಹಲಿ: ‘ಪಾಕಿಸ್ತಾನ ಮಿಲಿಟರಿ ಕೋರ್ಟ್‌ನಿಂದ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆ ಅಧಿಕಾರಿ ಕುಲಭೂಷಣ ಜಾಧವ್‌ ಅವರ ಬಿಡುಗಡೆಗೆ, ಆ ದೇಶದ ಮನವೊಲಿಸುವ ಯತ್ನ ತೆರೆಮರೆಯಲ್ಲಿ ನಡೆದಿದೆ’ ಎಂದು ಹಿರಿಯ ವಕೀಲ ಹರೀಶ್‌ ಸಾಳ್ವೆ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಕೀಲರ ಪರಿಷತ್‌ ಹಮ್ಮಿಕೊಂಡಿದ್ದ ಉಪನ್ಯಾಸ ಸರಣಿ ಕಾರ್ಯಕ್ರಮದ ಅಂಗವಾಗಿ ಲಂಡನ್‌ನಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಅವರು ಮಾತನಾಡಿದರು.

ದೇಶದಲ್ಲಿ ಗೂಢಚಾರಿಕೆ ಮತ್ತು ವಿಧ್ವಂಜಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಜಾಧವ್‌ ಅವರನ್ನು ಪಾಕಿಸ್ತಾನದ ಅಧಿಕಾರಿಗಳು ಬಂಧಿಸಿದ್ದಾರೆ. ವಿಚಾರಣೆ ನಂತರ, ಅಲ್ಲಿನ ಮಿಲಿಟರಿ ಕೋರ್ಟ್‌ 2017ರಲ್ಲಿ ಜಾಧವ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಿ ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿರುವ ಭಾರತದ ಪರ ಸಾಳ್ವೆ ವಾದ ಮಂಡಿಸುತ್ತಿದ್ದಾರೆ.

ADVERTISEMENT

‘ಜಾಧವ್‌ ಅವರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಐಸಿಜೆ ನೀಡಿರುವ ಸೂಚನೆಯನ್ನು ಯಾವ ರೀತಿ ಜಾರಿಗೊಳಿಸಲಾಗುತ್ತದೆ ಎಂಬ ನಮ್ಮ ಪ್ರಶ್ನೆಗೆ ಪಾಕಿಸ್ತಾನ ಈ ವರೆಗೂ ಉತ್ತರ ನೀಡಿಲ್ಲ’ ಎಂದು ಸಾಳ್ವೆ ಹೇಳಿದರು.

‘ಮಾನವೀಯತೆ ಇಲ್ಲವೇ ಇತರ ಯಾವುದೇ ಆಧಾರದಲ್ಲಿ ಜಾಧವ್‌ ಅವರನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರೂ, ಪಾಕಿಸ್ತಾನ ಪ್ರತಿಕ್ರಿಯಿಸುತ್ತಿಲ್ಲ. ನಾವು ಬರೆದ 4–5 ಪತ್ರಗಳಿಗೂ ಉತ್ತರಿಸಿಲ್ಲ. ತಾನು ನೀಡಿದ್ದ ನಿರ್ದೇಶನವನ್ನು ಪಾಕಿಸ್ತಾನ ಪಾಲಿಸಿಲ್ಲ ಎಂದು ಮತ್ತೆ ಐಸಿಜೆ ಮೆಟ್ಟಿಲೇರಬೇಕಾದಂತಹ ಹಂತ ತಲುಪಿದ್ದೇವೆ ಎನಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.